– ಮಾಲೀಕನ ಡೈರಿಯಲ್ಲಿ ಕಳ್ಳನ ಮಾತು
– ಕಿಟಕಿ ಒಡೆದರೂ ಪ್ರಯೋಜನವಾಗಲಿಲ್ಲ
ಭೋಪಾಲ್: ಕಳ್ಳನೊಬ್ಬ ರಾತ್ರಿ ಪೂರ್ತಿ ಮನೆಯ ಕಿಟಕಿಯೊಡೆದು, ಕಷ್ಟಪಟ್ಟು ಒಳಗೆ ನುಗ್ಗಿದರೂ ಏನೂ ಸಿಗದ್ದಕ್ಕೆ ಬೇಸರಗೊಂಡು ಮರಳಿ ಬರುವಾಗ ಮಾಲೀಕನ ಡೈರಿಯಲ್ಲಿ ನೀನು ಕಂಜೂಸ್ ಎಂದು ಬರೆದು ಮರಳಿದ್ದಾನೆ.
ಮಧ್ಯಪ್ರದೇಶದ ಶಾಜಾಪುರದ ಆದರ್ಶ ನಾಗೀನ್ ನಗರದಲ್ಲಿ ಘಟನೆ ನಡೆದಿದ್ದು, ಕಳ್ಳತನ ಮಾಡಲೆಂದು ಕಷ್ಟ ಪಟ್ಟು ರಾತ್ರಿ ಇಡೀ ಕಿಟಕಿ ಒಡೆದು ಕಳ್ಳ ಒಳಗೆ ನುಗ್ಗಿದ್ದಾನೆ. ಆದರೆ ಮನೆಯಲ್ಲಿ ಏನೂ ಸಿಗದ್ದನ್ನು ಕಂಡು ಬೇಸರಗೊಂಡಿದ್ದಾನೆ. ಆಗ ಮಾಲೀಕನಿಗೆ ತಿಳಿಸಲು ಅವನ ಡೈರಿಯಲ್ಲಿಯೇ ಸಾಲುಗಳನ್ನು ಬರೆದು ಮನೆಯಿಂದ ಕಾಲ್ಕಿತ್ತಿದ್ದಾನೆ.
ಸಿಟ್ಟಿನಿಂದಲೇ ಈ ಸಾಲುಗಳನ್ನು ಬರೆದಿರುವ ಕಳ್ಳ, ಮನೆಯ ಮಾಲೀಕನಿಗೆ ಕಂಜೂಸ್ ಎಂದು ಹೇಳಿದ್ದಾನೆ. ನೀನು ತುಂಬಾ ಕಂಜೂಸ್. ಅಷ್ಟು ಕಷ್ಟ ಪಟ್ಟು ಕಿಟಕಿ ಒಡೆದರೂ ಸಹ ಪ್ರಯೋಜನವಾಗಲಿಲ್ಲ. ನನ್ನ ರಾತ್ರಿ ಹಾಳಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾನೆ.
ಗ್ರಾಮೀಣ ಎಂಜಿನೀಯರಿಂಗ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋನಿಯವರ ಮನೆ ಆದರ್ಶ ನಾಗೀನ್ ನಗರದಲ್ಲಿದ್ದು, ನ್ಯಾಯಾಧೀಶರ ಮನೆಯ ಹತ್ತಿರವೇ ಇದೆ. ಮಾಲೀಕ ಬೇರೆಡೆ ತೆರಳಿದಾಗ ಕಳ್ಳ ಮನೆಗೆ ನುಗ್ಗಿದ್ದಾನೆ. ಆದರೆ ಏನೂ ಸಿಗದೆ ವಾಪಾಸಾಗಿದ್ದಾನೆ.
ಕಳ್ಳತನ ನಡೆದ ಮರುದಿನ ಸೋನಿಯವರು ತಮ್ಮ ಮನೆಗೆ ಆಗಮಿಸಿದ್ದು, ಆಗ ಕಳ್ಳ ಡೈರಿಯಲ್ಲಿ ಬರೆದಿಟ್ಟಿದ್ದ ಸಾಲನ್ನು ನೋಡಿದ್ದಾರೆ. ನಂತರ ಸೋನಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆಗ ಕಬೋರ್ಡ್ಗಳು ತೆರದಿದ್ದು, ಬಟ್ಟೆ ಹಾಗೂ ದಿನ ಬಳಕೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡಿದ್ದಾರೆ. ಅಲ್ಲದೆ ಒಂದು ಸಣ್ಣ ಕಾಫೀ ಟೇಬಲ್ ಮೇಲೆ ಕಳ್ಳ ಡೈರಿಯಲ್ಲಿ ಬರೆದಿಟ್ಟಿದ್ದ ಸಾಲುಗಳನ್ನು ನೋಡಿದ್ದಾರೆ.
ಕೆಲಸದಿಂದ ಬಂದ ನಂತರ ಸೋನಿಯರು ದೂರು ನೀಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಸುಳಿವು ಪತ್ತೆ ಹಚ್ಚಲು ಅಲ್ಲಿನ ಸಿಸಿಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಕಳ್ಳ ಬರೆದಿದ್ದ ಸಾಲುಗಳನ್ನು ಲಿಪಿ ತಜ್ಞರಿಗೆ ಕಳುಹಿಸಲಾಗಿದೆ ಎಂದು ಶಾಜಾಪುರದ ಕೊಟ್ವಾಲಿ ಪೊಲೀಸ್ ಠಾಣೆಯ ಎಸ್ಪಿ ಪಂಕಜ್ ಶ್ರೀವಾಸ್ತವ್ ಅವರು ಮಾಹಿತಿ ನೀಡಿದ್ದಾರೆ.