ಚಿಕ್ಕಮಗಳೂರು: ಆನೆ ಈಜೋದನ್ನ ಅಷ್ಟಾಗಿ ಯಾರು ನೋಡಿರಲ್ಲ. ನೋಡಿದ್ರು ಕೂಡ ದಡದಲ್ಲಿ ನಿಂತು ಸೊಂಡಿಲಿನಿಂದ ಮೈಮೇಲೆ ನೀರು ಉಗ್ಗಿಕೊಳ್ಳೋದ್ನಷ್ಟೇ ನೋಡಿರ್ತಿರಾ. ಆದರೆ ಗಜರಾಜ ಅಷ್ಟು ದೊಡ್ಡ ಗಾತ್ರದ ದೇಹವನ್ನ ಸಂಪೂರ್ಣ ನೀರಿನಲ್ಲಿ ಮುಳುಗಿಸಿ ಈಜುತ್ತಾ ಮುಂದೆ ಹೋಗೋದ್ನ ನೋಡಸಿಗೋದು ತೀರಾ ವಿರಳ.
ಅಂತಹಾ ಅಪರೂಪದ ವಿಡಿಯೋ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬೆಲೇನಹಳ್ಳಿ ಹುಡುಗರ ಮೊಬೈಲ್ನಲ್ಲಿ ಸೆರೆಯಾಗಿದೆ. ಹೌದು ಇಷ್ಟು ದಿನ ಮಲೆನಾಡಿನ ಕಾಡಂಚಿನ ಗ್ರಾಮಗಳಿಗೆ ಬರ್ತಿದ್ದ ಗಜರಾಜ ಇದೀಗ ಬಯಲು ಸೀಮೆಯ ಭತ್ತದ ಗದ್ದೆಗಳಿಗೆ ಬರೋದಕ್ಕೆ ಶುರುವಿಟ್ಟಿದ್ದಾನೆ.
ಕಳೆದ ರಾತ್ರಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬೇಲೆನಹಳ್ಳಿ ಗ್ರಾಮದಂಚಿಗೆ ಭದ್ರಾ ಸಂರಕ್ಷಿತ ಅರಣ್ಯದಿಂದ ಬಂದ ಒಂಟಿ ಸಲಗ ಇಡೀ ರಾತ್ರಿ ಗ್ರಾಮದಂಚಿನಲ್ಲೇ ಬೀಡು ಬಿಟ್ಟಿದ್ದಾನೆ. ರಾತ್ರಿ ಬೆಲೇನಹಳ್ಳಿಯಲ್ಲಿ ಕಾಲ ಕಳೆದ ಗಜೇಂದ್ರ ಬೆಳಗಾಗುತ್ತಿದ್ದಂತೆ ಸಮೀಪದ ಕೆರೆಯಲ್ಲಿ ಫ್ರೆಶ್ ಆಗಿ ಹುರುಳುಹಳ್ಳಿ, ಹಿರೇಕಾತೂರಿನ ಜಮೀನುಗಳಲ್ಲೂ ಓಡಾಟ ನಡೆಸಿದೆ.
ಐರಾವತನಿಂದ ಹೊಲ-ಗದ್ದೆ-ತೋಟಗಳು ನಾಶವಾಗಿದ್ದು, ಇದನ್ನೆಲ್ಲಾ ಕಂಡ ರೈತರು ಜೀವಭಯದಿಂದ ಹೊಲ ಗದ್ದೆಗಳಲ್ಲಿ ಕೆಲಸ ಮಾಡೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ಸ್ಥಳಕ್ಕೆ ಬಂದ ತರೀಕೆರೆ ಅರಣ್ಯಾಧಿಕಾರಿಗಳು ಆನೆಯನ್ನ ಓಡಿಸಲು ಹರಸಾಹಸ ಪಟ್ಟಿದ್ದಾರೆ.
https://www.youtube.com/watch?v=xw-t4if4uPo&feature=youtu.be