ಹಾಸನ: ಕಾಡಾನೆ ಸೆರೆ ವೇಳೆ ಕ್ಯಾಪ್ಟನ್ ಅರ್ಜುನ (Arjuna) ದುರಂತ ಸಾವು ಕಂಡ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ (Forest Department) ಸ್ಥಗಿತಗೊಳಿಸಿದೆ. ಇಂದು (ಬುಧವಾರ) ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಐದು ಸಾಕಾನೆಗಳನ್ನು ಕ್ಯಾಂಪ್ಗಳಿಗೆ ಕಳುಹಿಸಲು ನಿರ್ಧರಿಸಲಾಗಿದೆ.
ಅರ್ಜುನನ ನಾಯಕತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಪ್ರಶಾಂತ, ಭೀಮ, ಸುಗ್ರೀವ, ಅಶ್ವತ್ಥಾಮ ಹಾಗೂ ಧನಂಜಯ ಆನೆಗಳನ್ನು ವಾಪಸ್ ಕ್ಯಾಂಪ್ಗೆ ಕಳಿಸಲು ತಿರ್ಮಾನಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಸಾಕಾನೆಗಳು ವಾಪಸ್ ತೆರಳಲಿವೆ. ಅರ್ಜುನನ ನೇತೃತ್ವದಲ್ಲಿ ನ.24 ರಿಂದ 9 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ, ಆರು ಸಲಗಗಳ ಸೆರೆ ಮತ್ತು ಸ್ಥಳಾಂತರ ಕಾರ್ಯಾಚರಣೆ ಆರಂಭವಾಗಿತ್ತು. ಇದುವರೆಗೂ ಮೂರು ರೇಡಿಯೋ ಕಾಲರ್ ಅಳವಡಿಸಿದ್ದು, ಮೂರು ಸಲಗಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ. ಇದನ್ನೂ ಓದಿ: ಮೈಸೂರಿಗೆ ಕಳುಹಿಸಿಕೊಡಿ ಇಲ್ಲವೇ ಅರ್ಜುನನ ಜೊತೆ ನಮ್ಮನ್ನೂ ಮಣ್ಣು ಮಾಡಿ: ಗೋಳಾಡಿದ ಮಾವುತ
ಕಾಡಾನೆ ಜೊತೆಗಿನ ಕಾಳಗದಲ್ಲಿ ದುರಂತ ಸಾವಿಗೀಡಾದ ಅರ್ಜುನನನ್ನು ಮಂಗಳವಾರ ವಿಧಿ-ವಿಧಾನ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಸಕಲೇಶಪುರದ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಮಣ್ಣಲ್ಲಿ ಮಣ್ಣಾಯ್ತಾ ಅರ್ಜುನನ ಸಾವಿನ ರಹಸ್ಯ?: ಅರ್ಜುನನ ಸಾವಿನ ಬಗ್ಗೆ ಸ್ವತಃ ಮಾವುತನೇ ಅನುಮಾನ ವ್ಯಕ್ತಪಡಿಸಿದ್ದಾನೆ. ಅರ್ಜುನನ ದೇಹಕ್ಕೆ ಗುಂಡೇಟು ತಗುಲಿದೆ ಎಂಬ ಅನುಮಾನ ಇದ್ದರೂ ಸಹ ವಿಸ್ತೃತ ಮರಣೋತ್ತರ ಪರೀಕ್ಷೆ ನಡೆದಿಲ್ಲ. ಕೇವಲ ಬಾಹ್ಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕನಿಷ್ಠ ಅರ್ಜನನ ಮೃತದೇಹದ ಮತ್ತೊಂದು ಭಾಗವನ್ನು ನೋಡದೇ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಅಧಿಕಾರಿಗಳ ನಡೆಯ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರ್ಜುನ ಮೃತಪಟ್ಟು ಬಿದ್ದ ಸ್ಥಿತಿಯಲ್ಲಿಯೇ ಅಧಿಕಾರಿಗಳು ಗುಂಡಿಗಿಳಿಸಿದ್ದಾರೆ. ಮೃತದೇಹದ ಮತ್ತೊಂದು ಮಗ್ಗುಲು ಹೊರಳಿಸಿ ನೋಡುವ ಬಗ್ಗೆಯೂ ಅಧಿಕಾರಿಗಳು ಕ್ರಮವಹಿಸಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ಈ ನಡೆ ಬಗ್ಗೆ ಹಲವು ಅನುಮಾನ ಮೂಡಿದ್ದು, ಕೇವಲ ದಂತ ತೆಗೆದು, ದೇಹದ ಒಂದು ಭಾಗದ ಬಾಹ್ಯ ಪರೀಕ್ಷೆ ನಡೆಸಿ ಇದೇ ಮರಣೋತ್ತರ ಪರೀಕ್ಷೆ ಎನ್ನುತ್ತಿದ್ದಾರೆ. ಅಂಬಾರಿ ಹೊತ್ತಿದ್ದ ಆನೆ ಎನ್ನುವ ನೆಪ ಹೇಳಿ ಅನುಮಾನ ಉಳಿಸಿಯೇ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಅಲ್ಲದೇ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅರ್ಜುನನ ಅಂತ್ಯಸಂಸ್ಕಾರಕ್ಕೆ ಅಡ್ಡಿ – ಪೊಲೀಸರಿಂದ ಲಾಠಿ ಪ್ರಹಾರ, ದಿಕ್ಕಾಪಾಲಾಗಿ ಓಡಿದ ಜನ