ರಾಯಚೂರು: ಕಾಂಗ್ರೆಸ್ ಸರ್ಕಾರ (Congress Government) ಘೋಷಿಸಿರುವ 200 ಯೂನಿಟ್ ಉಚಿತ ವಿದ್ಯುತ್ (200 Unit Electricity) ಗ್ಯಾರಂಟಿ ಗೊಂದಲದ ನಡುವೆ ರಾಯಚೂರಿನ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಜೆಸ್ಕಾಂಗೆ (GESCOM) ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ.
ಗ್ರಾಮಿಣ ಭಾಗದಲ್ಲಿ ಗ್ರಾಮಸ್ಥರು, ಬಡ ರೈತರಿಂದ (Farmers) ವಸೂಲಿ ಮಾಡಿದ ವಿದ್ಯುತ್ ಬಿಲ್ಗೆ ರಶೀದಿ ಕೊಡದೇ ಸಂಗ್ರಹಿಸಿದ ಹಣವನ್ನ ಬ್ಯಾಂಕ್ಗೂ ಕಟ್ಟದೇ ಗ್ರಾಮ ವಿದ್ಯುತ್ ಬಿಲ್ ಕಲೆಕ್ಟರ್ಗಳೇ ಗುಳುಂ ಮಾಡಿರುವುದು ಬಯಲಾಗಿದೆ. ತಕ್ಷಣದ ಮಾಹಿತಿ ಪ್ರಕಾರ ರಾಯಚೂರು ತಾಲೂಕಿನ ಚಂದ್ರಬಂಡಾ ಜೆಸ್ಕಾಂ ಶಾಖೆ ಸೇರಿ ಸುಮಾರು 20 ಲಕ್ಷ ರೂಪಾಯಿ ವಂಚನೆಯಾಗಿರುವುದು ಕಂಡುಬಂದಿದೆ ಎಂದು ಜೆಸ್ಕಾಂ ಇಇ ಚಂದ್ರಶೇಖರ ದೇಸಾಯಿ ಹೇಳಿದ್ದಾರೆ. ಇದನ್ನೂ ಓದಿ: ವಿಪಕ್ಷಗಳ ಬಹಿಷ್ಕಾರಕ್ಕೆ ದೊಡ್ಡಗೌಡರ ಡೋಂಟ್ ಕೇರ್ – ಸಂಸತ್ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ನಿರ್ಧಾರ
ಆರ್.ಆರ್ ಸಂಖ್ಯೆಗಳ ವಸೂಲಾತಿ ಹಾಗೂ ಬ್ಯಾಂಕ್ಗೆ ಹಣ ಸಂದಾಯವಾದ ಕುರಿತು ಜೆಸ್ಕಾಂ ಅಧಿಕಾರಿಗಳು ಪರಿಶೀಲಿಸಿದಾಗ ನಕಲಿ ದಾಖಲೆಗಳ ಮೂಲಕ ಗೋಲ್ಮಾಲ್ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಚಂದ್ರಬಂಡಾ ಗ್ರಾಮದ ವಿದ್ಯುತ್ ಬಿಲ್ ಕಲೆಕ್ಟರ್ ಮಲ್ಲೇಶ್ಗೆ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನೋಟಿಸ್ ನೀಡಿದ್ದು ಕ್ರಮಕ್ಕೆ ಮುಂದಾಗಿದ್ದಾರೆ. ಆದ್ರೆ ಚಂದ್ರಬಂಡಾ ಮಾತ್ರವಲ್ಲದೇ ಹಲವೆಡೆ ಇದೇ ರೀತಿ ಗೋಲ್ ಮಾಲ್ ನಡೆದಿದ್ದು ಕೋಟ್ಯಾಂತರ ರೂಪಾಯಿ ವಂಚಿಸಿರುವ ಅನುಮಾನ ಮೂಡಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಅಮುಲ್ ಹಾಲು ಸಂಗ್ರಹಿಸುವುದನ್ನು ನಿಲ್ಲಿಸಿ: ಅಮಿತ್ ಶಾಗೆ ಸ್ಟಾಲಿನ್ ಪತ್ರ
ಗ್ರಾಮೀಣ ಭಾಗದ ಬಹುತೇಕ ಬಡ ರೈತರು ಉಚಿತ ವಿದ್ಯುತ್ ಭರವಸೆ ಇಟ್ಟುಕೊಂಡು ಕುಳಿತಿರುವಾಗ ತಮ್ಮ ಹಣ ದುರ್ಬಳಕೆಯಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಬಿಲ್ ಕೊಡದೇ, ಹಣವನ್ನ ಬ್ಯಾಂಕ್ಗೂ ಕಟ್ಟದೇ ಇರುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಅಂತಾ ಒತ್ತಾಯಿಸಿದ್ದಾರೆ.