ಉಡುಪಿ: 2018 ರ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದಂತೆ ಚುನಾವಣಾ ಆಯೋಗ ನಿಯಮಗಳನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರಲು ಆರಂಭಿಸಿದೆ. ಇದರ ಭಾಗವಾಗಿ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪ್ರಚಾರ ಮಾಡಿದ್ರೂ ಆಯಾಯ ಜಿಲ್ಲಾಧಿಕಾರಿಗಳು ಕಣ್ಣಿಟ್ಟಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಅವರು, ಸಾಮಾಜಿಕ ಜಾಲತಾಣದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಕ್ಕೆ ಕಡಿವಾಣ ಹಾಕಲು ವಿಶೇಷ ನಿಗಾ ತಂಡ ರಚನೆ ಮಾಡಲಾಗುವುದು. ಅಲ್ಲದೇ ಯಾವುದೇ ಅಭ್ಯರ್ಥಿ ಪರ ವಿರುದ್ಧ ಹೆಚ್ಚು ಪ್ರಚಾರ ಮಾಡಿದರೆ ಅದನ್ನೂ ಅಭ್ಯರ್ಥಿ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು.
ಇದೆ ವೇಳೆ ಕೋಮು ಭಾವನೆ ಪ್ರಚೋದಿಸುವ ಚಟುವಟಿಕೆ ಮೇಲೂ ನಿಗಾ ಇಡಲಿದ್ದು, ಪ್ರಚಾರ ತಾರಕಕ್ಕೆ ಏರಿ ಕೋಮು ಭಾವನೆಗಳು ಕೆಡದಂತೆ ಎಲ್ಲಾ ಪಕ್ಷ ಮತ್ತು ಅಭ್ಯರ್ಥಿಗಳು ಎಚ್ಚರಿಸಬೇಕು ಎಂದು ಹೇಳಿದರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಬೂತ್ ರಚನೆ ಮಾಡಿ ಮಹಿಳಾ ಸಿಬ್ಬಂದಿಗಳನ್ನು ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು.