ಬಾಗಲಕೋಟೆ: ಪ್ರವಾಹ ವೀಕ್ಷಣೆಗೆ ಹೋದ ಮಾಜಿ ಸಿಎಂ, ಬದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯನವರಿಗೆ ಅಜ್ಜಿಯೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆ ಬಾಗಲಕೋಟೆ ಕಿತ್ತಲಿ ಗ್ರಾಮದಲ್ಲಿ ನಡೆದಿದೆ.
ವೃದ್ಧೆ ಈರವ್ವ ತಳವಾರ ಮಾರ್ಗ ಮಧ್ಯೆ ಸಿದ್ದರಾಮಯ್ಯನವರ ಕಾರು ತಡೆದು ತನ್ನ ಕಷ್ಟ ತೋಡಿಕೊಂಡರು. ನಮಗೆ ಈಗ ಇರಲು ಮನೆ ಇಲ್ಲ. ಬಾಡಿಗೆ ಮನೆಯಲ್ಲಿ ಇದ್ದೇನೆ. ಚುನಾವಣೆಗೆ ಬಂದಾಗ ನೀವು ವೋಟು ಹಾಕಿಸಿಕೊಳ್ಳುವುದಕ್ಕೆ ಬರುತ್ತಿರಿ. ಆದರೆ ಈಗ ನಮ್ಮ ಮನೆ ಮುಳುಗಿದೆ. ಈಗ ಯಾರೂ ನಮ್ಮನ್ನು ಕೇಳುವವರಿಲ್ಲ. ನಮಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಿದ್ದರಾಮಯ್ಯ ಅವರು ‘ಸರಿ ಆಯ್ತು. ನಾನು ನಿಮಗೆ ಮನೆ ಕಟ್ಟಿಸಿಕೊಡ್ತೀನಿ’ ಎಂದು ಭರವಸೆ ನೀಡಿದರು.
ಸಿಂಎ ಯಡಿಯೂರಪ್ಪನಿಗೆ ಎಷ್ಟು ಬಾರಿ ಗಂಭೀರವಾಗಿ ಹೇಳಬೇಕೋ ಹೇಳಿದ್ದೇನೆ. ಯಡಿಯೂರಪ್ಪನಿಗೆ ಕಿವಿ ಹಿಂಡಿ ಹೇಳಿದ್ದೇನೆ ಎಂದು ಸಿದ್ದರಾಮಯ್ಯ ಸಂತ್ರಸ್ತನೊಬ್ಬನ ಕಿವಿ ಹಿಂಡಿ ಉದಾಹರಿಸಿ ಹೇಳಿ ಹಾಸ್ಯ ಚಟಾಕಿ ಹಾರಿಸಿದರು. ಕಿವಿ ಹಿಂಡಿಸಿಕೊಂಡ ಸಂತ್ರಸ್ತ, ನಂದು ಕಿವಿ ಹಿಂಡಿದ್ರಲ್ಲಾ ಇನ್ನು ನಾನು ಮಾಡಬೇಕೇ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಆಗ ಸಿದ್ದರಾಮಯ್ಯ ಅವರು, ನಾನು ಸಿಎಂ ಆಗಿದ್ದಾಗ ಈ ರೀತಿ ಪ್ರವಾಹ ಬಂದಿರಲಿಲ್ಲ. ನಾನು ಸಿಎಂ ಆಗಿದ್ದಿದ್ದರೆ ಇಷ್ಟು ಸಮಸ್ಯೆ ಆಗಲು ಬಿಡುತ್ತಿರಲಿಲ್ಲ ಎಂದರು.
ಮಾರ್ಗ ಮಧ್ಯೆ ವಾಹನ ತಡೆದು ಸಂತ್ರಸ್ತರ ಮನವಿ ಆಲಿಸುವಾಗ ಸಿಎಂ ಯಡಿಯೂರಪ್ಪನವರ ವಿರುದ್ಧ ಹಾಸ್ಯದ ಮೂಲಕ ಸರ್ಕಾರ ವಿಫಲವಾಗಿದೆ. ನೆರೆ ಸಂಬಂಧ ಸರಿಯಾಗಿ ಪರಿಹಾರ ಕೈಗೊಳ್ಳುತ್ತಿಲ್ಲ ಎಂದು ದೂರುತ್ತಿದ್ದರು.