ತಿರುವನಂತಪುರಂ: 30 ವರ್ಷದ ಹಳೆ ವೈಷಮ್ಯ ಹಿನ್ನೆಲೆ ಮಾಜಿ ಸೈನಿಕನೊಬ್ಬ ವೃದ್ಧ ದಂಪತಿಯ ತಲೆಗೆ ಸುತ್ತಿಗೆಯಿಂದ ಹಲ್ಲೆ ನಡೆಸಿ ನಂತರ ಬೆಂಕಿ ಹಚ್ಚಿ ಹತ್ಯೆಗೈದಿರುವ ಘಟನೆ ಕೇರಳದ (Kerala) ತಿರುವನಂತಪುರಂನಲ್ಲಿ (Thiruvananthapuram) ನಡೆದಿದೆ.
ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ಪ್ರಭಾಕರ ಕುರುಪ್ ಮತ್ತು ಅವರ ಪತ್ನಿ ವಿಮಲಾ ಕುಮಾರಿ ಮೃತ ದುರ್ದೈವಿಗಲಾಗಿದ್ದು, ಆರೋಪಿಯನ್ನು ಶಶಿಧರನ್ ನಾಯರ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಶೇ.60 ರಷ್ಟು ಸುಟ್ಟ ಗಾಯಗಳಾಗಿದ್ದರಿಂದ ದಂಪತಿಯನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದೀಗ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಘಟನೆ ವೇಳೆ ವೃದ್ಧ ದಂಪತಿಯಷ್ಟೇ ಮನೆಯಲ್ಲಿದ್ದರು ಎಂಬ ವಿಚಾರ ತಿಳಿದುಬಂದಿದೆ.
ಘಟನೆಗೆ ಕಾರಣವೇನು?
ಶಶಿಧರನ್ ನಾಯರ್ ಅವರ ಮಗ ಸುಮಾರು ಮೂವತ್ತು ವರ್ಷಗಳ ಹಿಂದೆ ಬಹ್ರೇನ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಭಾಕರ ಕುರುಪ್ ಅವರು ಶಶಿಧರ್ ನಾಯರ್ ಅವರ ಮಗನಿಗೆ ವಿದೇಶಕ್ಕೆ ಹೋಗಲು ಸಹಾಯ ಮಾಡಿದ್ದರು. ಆದರೆ ಅವರು ಬಯಸಿದ ಕೆಲಸ ಸಿಗಲಿಲ್ಲ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಅವರು ನಂತರ ಆತ್ಮಹತ್ಯೆಗೆ ಶರಣಾದರು. ತಮ್ಮ ಮಗ ಸಾಯಲು ಪ್ರಭಾಕರ ಕುರುಪ್ ಕೂಡ ಕಾರಣ ಎಂದು ಶಶಿಧರನ್ ನಾಯರ್ ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ : ನಮ್ಮ ಇಲಾಖೆಯಲ್ಲಿರುವ ಕಳ್ಳ ಅಧಿಕಾರಿಗಳಿಗೆ ನಾನೇ ಬಾಸ್ ಎಂದಿದ್ದ ಕೃಷಿ ಸಚಿವ ರಾಜೀನಾಮೆ
ಹಲವು ವರ್ಷಗಳ ಕಾಲ ಈ ಪ್ರಕರಣವನ್ನು ಎಳೆದಾಡಿದ್ದ ನ್ಯಾಯಾಲಯ ಶುಕ್ರವಾರ ಪ್ರಭಾಕರ್ ಕುರುಪ್ ಅವರನ್ನು ನಿರಪರಾಧಿ ಎಂದು ಘೋಷಿಸಿದೆ. ಇದರಿಂದ ಆಕ್ರೋಶಗೊಂಡ ಶಶಿಧರ್ ನಾಯರ್ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು. ಶನಿವಾರ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಯಿತು. ಈ ವೇಳೆ ವಿಮಲಾ ಕುಮಾರಿ ಅವರು ಪ್ರಭಾಕರ ಕುರುಪ್ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಶಶಿಧರ್ ನಾಯರ್ ಸುತ್ತಿಗೆಯಿಂದ ಇಬ್ಬರ ತಲೆಗೆ ಹೊಡೆದಿದ್ದಾನೆ. ಬಳಿಕ ದಂಪತಿ ಮೇಲೆ ಬಾಟಲಿನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಈ ವೇಳೆ ಮನೆಯಿಂದ ಬೆಂಕಿ ಹೊತ್ತಿ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ದಂಪತಿಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ಆದರೆ ಗಂಭೀರವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ದಂಪತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಜೊತೆಗೆ ಘಟನೆ ವೇಳೆ ಶಶಿಧರನ್ಗೂ ಸುಟ್ಟಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಅಮೃತ ಸರೋವರ ಯೋಜನೆಯಡಿ ಕೆರೆ ಅಭಿವೃದ್ಧಿ- ನಿರ್ಮಾಣಗೊಂಡ 45 ದಿನಕ್ಕೆ ತಡೆಗೋಡೆ ಕುಸಿತ