ಅಮರಾವತಿ: ಲೈಂಗಿಕ ದೌರ್ಜನ್ಯದ (Sexual Assault) ಅಪರಾಧ ಸಾಬೀತುಪಡಿಸಲು ವೀರ್ಯ ಸ್ಖಲನ (Ejaculation Of Semen) ಆಗಿರಲೇಬೇಕಾದ ಅಗತ್ಯ ಇಲ್ಲ ಎಂದು ಆಂಧ್ರ ಪ್ರದೇಶದ (Andhra Pradesh) ಹೈಕೋರ್ಟ್ (High Court) ಹೇಳಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಪ್ರಕರಣದ (POCSO) ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದ ಅಪರಾಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ವಿಚಾರವನ್ನು ನ್ಯಾಯಾಲಯ ಪ್ರಸ್ತಾಪಿಸಿದ್ದು, ಅಪರಾಧಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿದೆ.
ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ದಾಖಲಾದ ಸಾಕ್ಷ್ಯಾಧಾರಗಳಲ್ಲಿ (Evidence) ವೀರ್ಯ ಸ್ಖಲನ ಆಗಿರದೆ, ದೌರ್ಜನ್ಯದ ಕುರುಹು ಸಿಕ್ಕರೂ ಪೋಕ್ಸೊ ಕಾಯಿದೆಯ ಸೆಕ್ಷನ್ 3ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಲೈಂಗಿಕ ದೌರ್ಜನ್ಯದ ಅಪರಾಧ ಎಂದು ನಿರ್ಣಯಿಸಲು ಅಷ್ಟು ಸಾಕು ಎಂದು ನ್ಯಾಯಮೂರ್ತಿ ಚೀಕಾಟಿ ಮಾನವೇಂದ್ರನಾಥ್ ರಾಯ್ ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಟಿಫಿನ್ ಬಾಕ್ಸ್, ಹೊಲಿಗೆ ಯಂತ್ರ ಜಪ್ತಿ
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿದಾಗ, ಅದು ಪೋಕ್ಸೋ ಕಾಯಿದೆಯ ಸೆಕ್ಷನ್ 5ರ (ಎಮ್) ಅಡಿಯ ಲೈಂಗಿಕ ದೌರ್ಜನ್ಯಕ್ಕೆ ಸಮನಾಗಿರುತ್ತದೆ. ಹಾಗೂ ಸೆಕ್ಷನ್ 6ರಲ್ಲಿ ಹೇಳಲಾದ ತೀವ್ರ ತರವಾದ ಲೈಂಗಿಕ ದೌರ್ಜನ್ಯವನ್ನು ಮಾಡಿದ ವ್ಯಕ್ತಿಯ ವಿರುದ್ಧ ಅದು ಶಿಕ್ಷೆಯನ್ನು ಸೂಚಿಸುತ್ತದೆ ಎಂದು ನ್ಯಾಯಮೂರ್ತಿ ರಾಯ್ ತಮ್ಮ 22 ಪುಟಗಳ ತೀರ್ಪಿನಲ್ಲಿ ತಿಳಿಸಿದ್ದಾರೆ.
ಇದಲ್ಲದೆ ಬಾಲಕಿಯ ಜನನಾಂಗದಲ್ಲಿ ರಕ್ತವಿತ್ತು ಹಾಗೂ ಜನನಾಂಗಕ್ಕೆ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದರು. ಇದು ದೌರ್ಜನ್ಯಕ್ಕೆ ಒಳಗಾಗಿರುವುದನ್ನು ಸೂಚಿಸುತ್ತದೆ ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.
ವೀರ್ಯ ಪತ್ತೆಯಾಗದ ಕಾರಣ, ಯಾವುದೇ ದೌರ್ಜನ್ಯ ನಡೆದಿಲ್ಲ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಪೋಕ್ಸೋ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಲೈಂಗಿಕ ದೌರ್ಜನ್ಯದ ಅಪರಾಧವನ್ನು ಸಾಬೀತುಪಡಿಸಲು ಬೇಕಾಗಿರುವುದು, ಹೆಣ್ಣು ಮಗುವಿನ ಮೇಲೆ ದೇಹ ಅಥವಾ ಜನನಾಂಗಕ್ಕೆ ವ್ಯಕ್ತಿಯ ಗುಪ್ತಾಂಗ ಇಲ್ಲವೇ ಇತರೆ ವಸ್ತುಗಳಿಂದ ದೌರ್ಜನ್ಯ ಎಸಗಿದ್ದರೂ ಸಾಕು ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು 2016ರ ತೀರ್ಪನ್ನು ಎತ್ತಿಹಿಡಿದ್ದಾರೆ.
ಏನಿದು ಪ್ರಕರಣ?
2015ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ, 2016ರಲ್ಲಿ ಪಶ್ಚಿಮ ಗೋದಾವರಿ ಜಿಲ್ಲೆಯ (West Godavari District) ಎಲ್ಲೂರಿನ (Eluru) ವಿಶೇಷ ನ್ಯಾಯಾಧೀಶರು 5,000 ರೂ. ದಂಡ (Penalty) ಸೇರಿದಂತೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದರು. ಬಾಲಕಿಯ ವೈದ್ಯಕೀಯ ಪರೀಕ್ಷೆಯ (Examination) ಸಮಯದಲ್ಲಿ ವೀರ್ಯ ಪತ್ತೆಯಾಗಿರಲಿಲ್ಲ. ಸಂತ್ರಸ್ತ ಬಾಲಕಿ ಮೇಲೆ ಇತ್ತೀಚೆಗೆ ಲೈಂಗಿಕ ಕ್ರಿಯೆ ನಡೆಸಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ವೈದ್ಯರು ಅಂದು ವರದಿ ನೀಡಿದ್ದರು. ಈ ಆಧಾರದಲ್ಲಿ ಆರೋಪಿ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ. ಇದನ್ನೂ ಓದಿ: ಶೆಟ್ಟರ್ ನಿರ್ಧಾರದಿಂದ ಉಂಟಾದ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಜೆ.ಪಿ ನಡ್ಡಾ