ರಾಯಚೂರು: ಗೋಮಾಳ ಜಾಗಕ್ಕಾಗಿ ಇಬ್ಬರ ಕೊಲೆ ಹಾಗೂ ನಾಲ್ವರ ಮೇಲೆ ಹಲ್ಲೆ ಮಾಡಿದ್ದ 16 ಜನ ಅಪರಾಧಿಗಳಲ್ಲಿ 8 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ರಾಯಚೂರಿನ ಎರಡನೇ ಜೆಎಂಎಫ್ಸಿ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.
ಜಿಲ್ಲೆಯ ಮಾನ್ವಿಯ ಬೊಮ್ಮನಾಳ ಗ್ರಾಮದಲ್ಲಿ ಗೋಮಾಳ ಜಾಗಕ್ಕಾಗಿ ಜನವರಿ 10, 2014 ರಂದು ಕೊಲೆ ಮಾಡಲಾಗಿತ್ತು. ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನು ಓದಿ: ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ- 50 ಸಾವಿರ ರೂ. ದಂಡ
ಈ ಕೃತ್ಯದಲ್ಲಿ ಒಟ್ಟು 16 ಜನ ಅಪರಾಧಿಗಳು ಭಾಗಿಯಾಗಿದ್ದು, ಕಲ್ಲು, ಕಟ್ಟಿಗೆಯಿಂದ ಹೊಡೆದು ಇಬ್ಬರನ್ನು ಕೊಲೆ ಹಾಗೂ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಸೂಕ್ತ ಸಾಕ್ಷಿ ಆಧಾರದ ಮೇಲೆ ನ್ಯಾಯಾಲಯ ತೀರ್ಪು ನೀಡಿದ್ದು, 16 ಜನ ಅಪರಾಧಿಗಳಿಗೆ 3.16 ಲಕ್ಷ ರೂ. ದಂಡ, 8 ಜನ ಅಪರಾಧಿಗಳಿಗೆ ಜೀವಾವಧಿ, ಉಳಿದ 8 ಜನರಿಗೆ 10 ವರ್ಷ ಜೈಲು ವಿಧಿಸಿ, ಓರ್ವ ಆರೋಪಿಯನ್ನು ಖುಲಾಸೆಗೊಳಿಸಿದೆ.