ಬೆಂಗಳೂರು: ಶ್ರೀ ಸಾಯಿಸಿದ್ಧಿ ಪ್ರೊಡಕ್ಷನ್ ಲಾಂಛನದಲ್ಲಿ ಜಿ.ಪಿ.ಪ್ರಕಾಶ್ ಅವರು ನಿರ್ಮಿಸುತ್ತಿರುವ `ಎಡಕಲ್ಲು ಗುಡ್ದದ ಮೇಲೆ` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ ಅಳವಡಿಸಲಾಗುತ್ತ್ತಿದೆ. ಮೈಸೂರು, ಚಿಕ್ಕಮಗಳೂರು, ಉಡುಪಿ, ಬೆಂಗಳೂರು ಮುಂತಾದ ಕಡೆ ಚಿತ್ರಕ್ಕೆ ನಲವತ್ತೈದು ದಿನಗಳ ಚಿತ್ರೀಕರಣ ನಡೆದಿದೆ.
ದಿನದ ಹೆಚ್ಚಿನ ಪಾಲು ಉದ್ಯೋಗದಲ್ಲೇ ಕಳೆಯುವ ಅಪ್ಪ-ಅಮ್ಮನ ಪ್ರೀತಿಯಿಂದ ವಂಚಿತಳಾದ ಹೆಣ್ಣು ಮಗಳೊಬ್ಬಳ ಜೀವನದ ಕುರಿತ ಕಥಾ ಹಂದರವುಳ್ಳ ಈ ಚಿತ್ರಕ್ಕೆ ವಿವಿನ್ ಸೂರ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೊಂದು ಮಹಿಳಾ ಪ್ರಧಾನ ಹಾಗೂ ಕೌಟುಂಬಿಕ ಚಿತ್ರವೆನ್ನುವ ನಿರ್ದೇಶಕರು ಸದ್ಯದಲ್ಲೇ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.
ಆಶಿಕ್ ಅರುಣ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಶಂಕರ್ ಅವರ ಛಾಯಾಗ್ರಹಣವಿದೆ. ವಿಜಯ್ ಎಂ ಕುಮಾರ್ ಸಂಕಲನ ಹಾಗೂ ಸದಾ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಭಾರತಿ ವಿಷ್ಣುವರ್ಧನ್, ಎಡಕಲ್ಲು ಗುಡ್ಡ ಚಂದ್ರಶೇಖರ್, ಶ್ರೀನಾಥ್, ಸುಮಿತ್ರ, ದತ್ತಣ್ಣ, ಮುಗೂರು ಸುರೇಶ್, ಚಿದಾನಂದ್, ಭವ್ಯಶ್ರೀ ರೈ, ಜ್ಯೋತಿ ರೈ, ವೀಣಾ ಸುಂದರ್, ಲಕ್ಷ್ಮೀ ಸಿದ್ದಯ್ಯ, ಪದ್ಮಜಾರಾವ್, ಸಿಹಿಕಹಿ ಚಂದ್ರು, ರವಿ ಭಟ್, ಉಷಾ ಭಂಡಾರಿ, ಧರ್ಮೇಂದ್ರ, ಸ್ವಾತಿ ಶರ್ಮ, ಪ್ರಗತಿ, ವೈಭವಿ, ಮೇಘನ, ನಕುಲ್ ಮುಂತಾದವರಿದ್ದಾರೆ.
ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದ `ಎಡಕಲ್ಲು ಗಡ್ಡದ ಮೇಲೆ` ಚಿತ್ರದಲ್ಲಿ ನಟಿಸಿ, ಇತ್ತೀಚೆಗಷ್ಟೇ ವಿಧಿವಶರಾದ ಎಡಕಲ್ಲು ಗುಡ್ಡ ಚಂದ್ರಶೇಖರ್ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ ಅವರು ಈ ಚಿತ್ರದಲ್ಲಿ ನಟಿಸಿದ್ದು, ಅವರ ನಟನೆಯ ಕೊನೆಯ ಚಿತ್ರದ ಶೀರ್ಷಿಕೆ ಕೂಡ ‘ಎಡಕಲ್ಲು ಗುಡ್ಡದ ಮೇಲೆ’ ಆಗಿರುವುದು ವಿಪರ್ಯಾಸ.