ಬೆಂಗಳೂರು: ಸ್ಯಾಂಡಲ್ವುಡ್ ಶಿವರಾಮಣ್ಣ ಇನ್ನಿಲ್ಲ ಎಂಬ ಸುದ್ದಿ ಕೇಳಿದ ನಿರ್ಮಾಪಕ, ನಟ, ದ್ವಾರಕೀಶ್ ಅವರು ಭಾವನಾತ್ಮವಾಗಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದಾರೆ.
ದ್ವಾರಕೀಶ್ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದು, ಶಿವರಾಂ ಇಲ್ಲದೇ ನಾನು ಯಾವುದೇ ಕಾರ್ಯಕ್ರಮಗಳನ್ನು ಮಾಡುತ್ತಿರಲಿಲ್ಲ. 60ನೇ ಇಸವಿಯಿಂದ ನನ್ನ ಮತ್ತು ಅವನ ಒಡನಾಟ ಪ್ರಾರಂಭವಾಗಿತ್ತು ಎಂದು ನೆನೆದು ಭಾವುಕರಾದರು.
‘ಬೆರೆತ ಜೀವ’ ಸಿನಿಮಾದಿಂದಲ್ಲೂ ನನಗೆ ಅವನು ಗೊತ್ತು. ಅವನು ನನಗೆ ಪರಿಚಯ ಎನ್ನುವುದಕ್ಕಿಂತ ಅವನು ನನಗೆ ಅಣ್ಣನ ಸಮಾನನಾಗಿದ್ದನು. ನನ್ನ ಎಲ್ಲ ಚಿತ್ರಗಳಲ್ಲಿಯೂ ಅವನು ಪಾತ್ರ ಮಾಡಿದ್ದಾನೆ. ಶಿವರಾಂ ಒಬ್ಬ ಅದ್ಭುತ ನಟ ಎಂದು ನೆನಪಿಸಿಕೊಂಡರು.
ನಮ್ಮ ಅಣ್ಣ ‘ಶರಪಂಜರ’ ಚಿತ್ರವನ್ನು ನೋಡಿ, ನನಗೆ ಬಂದು ಲೇ, ನೀನು ನಟಿಸಬೇಕು ಎಂದು ಹೇಳುತ್ತಿಯಾ ಮೊದಲು ಹೋಗಿ ‘ಶರಪಂಜರ’ ಸಿನಿಮಾದ ಭಟ್ಟನ ಪಾತ್ರವನ್ನು ನೋಡು. ನಂತರ ನೀನು ನಟನಾಗಲು ಸಾಧ್ಯನಾ ಅಂತ ನೋಡು. ಆತ ತುಂಬಾ ಅದ್ಭುತವಾಗಿ ನಟಿಸಿದ್ದಾರೆ ಎಂದಿದ್ದನು. ಅಷ್ಟು ಹೆಸರುವಾಸಿಯಾದ ನಟ ಅವನು ಎಂದರು. ಇದನ್ನೂ ಓದಿ: ಕೆಬಿಸಿ ನಿರೂಪಣೆ ಒಪ್ಪಿಕೊಳ್ಳಲು ನಿಜವಾದ ಕಾರಣ ಬಿಚ್ಚಿಟ್ಟ ಬಿಗ್ ಬಿ
ಶಿವರಾಂ ಸಾಮಾನ್ಯವಾದ ನಟನಲ್ಲ. ಅದು ಅಲ್ಲದೇ ಅವನು ಎಲ್ಲರಿಗೂ ಬೇಕಾದವನು. ಯಾವುದೇ ಸಮಾರಂಭದಲ್ಲಿಯಾಗಲಿ, ಕೆಟ್ಟದಾಗಲಿ, ಒಳ್ಳೆಯಾದಗಲಿ ಅವನು ಇರಲೇಬೇಕಿತ್ತು. ನನ್ನ ಮಗನ ಮದುವೆಯನ್ನು ತನ್ನ ಮಗನ ಮದುವೆ ರೀತಿ ಮಾಡಿಕೊಟ್ಟಿದ್ದನು ಎಂದು ಅವರ ಜೊತೆಗಿನ ಆತ್ಮೀಯತೆಯನ್ನು ಹೇಳಿಕೊಂಡರು.
ಅವನನ್ನು ಮರೆಯುವುದಕ್ಕೆ ಯಾವತ್ತು ಸಾಧ್ಯವಿಲ್ಲ. ಶಿವರಾಂ ನಮ್ಮ ಕನ್ನಡ ಚಿತ್ರರಂಗದ ಎಲ್ಲರಿಗೂ ಬೇಕಾಗಿದ್ದ ವ್ಯಕ್ತಿ. ಯಾರ ಮನೆಯಲ್ಲಿ ಏನೇ ಆದರೂ ಅವನು ನೋಡಿಕೊಳ್ಳುತ್ತಿದ್ದನು. ಸ್ವಾಮಿ ಅಯ್ಯಪ್ಪ, ರಾಘವೇಂದ್ರಸ್ವಾಮಿಗಳ ಪರಮ ಭಕ್ತ. ದೇವರ ಮೇಲೆ ಅಪಾರವಾದ ಭಕ್ತಿಯನ್ನು ಹೊಂದಿದ್ದನು ಎಂದು ಆಧ್ಯಾತ್ಮಿಕ ಜೀವನದ ಬಗ್ಗೆ ಹೇಳಿದರು.
ನಾನು ಶಿವರಾಮಣ್ಣನಿಗೆ ಒಂದು ವಾರದಿಂದ ಫೋನ್ ಮಾಡುತ್ತಿದ್ದೇನೆ. ಆದರೆ ನಾನು ಎಷ್ಟೇ ಕಾಲ್ ಮಾಡಿದ ಅವನು ರಿಸೀವ್ ಮಾಡುತ್ತಿರಲಿಲ್ಲ. ಆ ಮೇಲೆ ಟಿವಿ ನೋಡಿ ಅವನಿಗೆ ಆರೋಗ್ಯ ಸರಿಯಿಲ್ಲ ಎಂಬ ವಿಷಯ ತಿಳಿಯಿತು. ಈ ವಿಷಯ ಕೇಳಿ ಮನಸ್ಸಿಗೆ ಬಹಳ ನೋವಾಯಿತು ಎಂದು ತಿಳಿಸಿದರು.
ಸಭ್ಯ ವಸ್ತುವನ್ನು ನಾವು ಕಳೆದುಕೊಂಡಿದ್ದೇವೆ. ನಾನು ಸಿನಿಮಾದಲ್ಲಿ ಮಾತ್ರವಲ್ಲ, ನಮ್ಮ ಕಷ್ಟ-ಸುಖಗಳಲ್ಲಿ ಅವನು ಭಾಗಿಯಾಗಿದ್ದನು. ಒಂದು ತಿಂಗಳ ಹಿಂದೆ ನಮ್ಮ ಮನೆಗೆ ಬಂದು ಸುಮಾರು 2 ಗಂಟೆಗಳ ಕಾಲ ಕುಳಿತುಕೊಂಡಿದ್ದ. ಆ ವೇಳೆ ನನ್ನ ಕಷ್ಟ-ಸುಖಗಳನ್ನು ವಿಚಾರಿಸಿಕೊಂಡ. ಧೈರ್ಯವಾಗಿರು ಎಂದು ಹೇಳಿದ ಎಂದು ಒಡಾನಾಟವನ್ನು ನೆನಪಿಸಿಕೊಂಡರು.
ಶಿವರಾಮಣ್ಣ ಸಾಮಾನ್ಯ ವ್ಯಕ್ತಿಯಲ್ಲ. ಅವನಿಗೆ ಸರಿಸಮನಾದ ವ್ಯಕ್ತಿಯಿಲ್ಲ. ಅವನನ್ನು ಎಷ್ಟು ವರ್ಣಿಸಿದರು ಸಾಲದು. ಇನ್ನೊಬ್ಬ ಶಿವರಾಂ ಕನ್ನಡದಲ್ಲಿ ಹುಟ್ಟುವುದಕ್ಕೆ ಸಾಧ್ಯವಿಲ್ಲ ಎಂದರು.