ಬೆಂಗಳೂರು: ನಟ ದುನಿಯಾ ವಿಜಯ್ ತಮ್ಮ ಮೊದಲ ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆಯೂ ಗಲಾಟೆ ನಡೆದ ವೇಳೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ವಿಜಯ್, ಬಳಿಕ ಸಂಧಾನ ನಡೆದ ಪರಿಣಾಮ ಪತ್ನಿ ನಾಗರತ್ನ ಅವರಿಗೆ ನೀಡಬೇಕಾದ ಆಸ್ತಿಯನ್ನು ನೀಡಿದ್ದರು. ಅಲ್ಲದೇ ತಮ್ಮ ಮಕ್ಕಳ ಹೆಸರಿನಲ್ಲೂ ಆಸ್ತಿಯನ್ನು ನೀಡಿದ್ದರು. ಆದರೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಘಟನೆಗಳಿಂದ ಬೇಸತ್ತಿರುವ ವಿಜಯ್ ಅವರು ಸದ್ಯ ಕಾನೂನಿನ ಮೂಲಕ ಅಧಿಕೃತವಾಗಿ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ಪತ್ನಿಯಿಂದ ವಿಚ್ಛೇದನ ಪಡೆಯಲು ಕಾರಣವನ್ನು ನೀಡಬೇಕಾಗುತ್ತದೆ. ಇದಕ್ಕೆ ಪತ್ನಿ ನಾಗರತ್ನ ಅವರ ಕೌರ್ಯ ಕಾರಣ ನೀಡಿದ್ದಾರೆ.
ಈ ಹಿಂದಿನ ಗಲಾಟೆಯ ನಂತರ ವಿಜಯ್, ನಾಗರತ್ನ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆ ವೇಳೆ ತಮ್ಮ ಎರಡು ಹೆಣ್ಣು ಮಕ್ಕಳನ್ನು ವಿಜಯ್ ನೋಡಿಕೊಂಡಿದ್ದರೆ, ನಾಗರತ್ನ ಅವರು ಮಗನೊಂದಿಗೆ ವಾಸಿಸುತ್ತಿದ್ದರು. ದುನಿಯಾ ವಿಜಯ್ ಹಲ್ಲೆ ಪ್ರಕರಣದಲ್ಲಿ ಜೈಲಿಗೆ ತೆರಳಿದ ವೇಳೆಯೂ ನಾಗರತ್ನ ಪತಿ ನನ್ನೊಂದಿಗೆ ಬರುತ್ತಾರೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದರು. ಅಲ್ಲದೇ ನಾನೇ ವಿಜಯ್ ಅವರ ಪತ್ನಿ ಎಂದು ಹೇಳಿ ಕೀರ್ತಿ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಸದ್ಯ ವಿಜಯ್ ಅವರ 2ನೇ ಪತ್ನಿ ಕೀರ್ತಿ ಅವರ ಮೇಲಿನ ಹಲ್ಲೆ ವಿಡಿಯೋ ಬಿಡುಗಡೆಯಾಗುತ್ತಿದಂತೆ ನಾಗರತ್ನ ಅವರು ನಾಪತ್ತೆಯಾಗಿದ್ದಾರೆ. ಕೀರ್ತಿ ಅವರ ಹಲ್ಲೆ ವಿರುದ್ಧ ಸದ್ಯ ನಾಗರತ್ನ ಅವರ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದರ ನಡುವೆ ಕೀರ್ತಿ ತಮ್ಮ ದೂರಿನಲ್ಲಿ ವಿಜಯ್ ಅವರ ಪುತ್ರಿಯರ ಮೇಲಿನ ಹೆಸರನ್ನು ಹಿಂಪಡೆದ ಹಿನ್ನೆಲೆಯಲ್ಲಿ ಪೊಲೀಸರು ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv