ಚಿಕ್ಕಬಳ್ಳಾಪುರ: ರಾತ್ರಿ ಕುಡಿದ ಮದ್ಯದ ಅಮಲು ಇಳಿಯದೆ ಕುಡುಕ ಯುವಕರು ನಂದಿಗಿರಿಧಾಮಕ್ಕೆ ಭೇಟಿ ನೀಡಿದ್ದಾರೆ.
ಕುಡುಕ ಯುವಕರು ರಾತ್ರಿ ಕುಡಿದ ಅಮಲಿನಲ್ಲಿ ಮದ್ಯದ ಬಾಟಲಿ ಸಮೇತ ನಂದಿಗಿರಿಧಾಮಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ ಯುವಕರನ್ನು ನಂದಿಗಿರಿಧಾಮದ ಮುಖ್ಯದ್ವಾರದಲ್ಲೇ ವಶಕ್ಕೆ ಪಡೆದುಕೊಳ್ಳಲಾಯಿತು. ಕೆಲ ಯುವಕರು ಟಿಕೆಟ್ ಖರೀದಿ ಮಾಡದೆ ಒಳನುಗ್ಗಲು ಯತ್ನಿಸಿದ್ದಾರೆ. ನಶೆಯಲ್ಲಿದ್ದ ಯುವಕನಿಗೆ ಪ್ರವೇಶ ನಿರಾಕರಿಸಿದ್ದಕ್ಕೆ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಾನೆ.
ಹೊಸ ವರ್ಷದ ಹಿನ್ನೆಲೆ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದೆ. ನಂದಿಗಿರಿಧಾಮದ ಸೌಂದರ್ಯ ಕಣ್ತುಂಬಿಕೊಳ್ಳೋಕೆ ಅಂತ ಪ್ರವಾಸಿಗರು ನಾ ಮುಂದು ತಾ ಮುಂದು ಮುಗಿಬಿದ್ದಿದ್ದಾರೆ. ಬೆಳಗ್ಗೆ 8 ಗಂಟೆಯವರೆಗೂ ಪ್ರವಾಸಿಗರ ಪ್ರವೇಶಕ್ಕೆ ಪೊಲೀಸ್ ಇಲಾಖೆ ನಿಷೇಧ ಹೇರಿತ್ತಾದರೂ ಪ್ರವಾಸಿಗರ ಒತ್ತಡದ ಹಿನ್ನೆಲೆಯಲ್ಲಿ 6 ಗಂಟೆ 30 ನಿಮಿಷಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.
ಮಧ್ಯ ರಾತ್ರಿಯಿಂದಲೇ ನಂದಿಗಿರಿಧಾಮ ಪ್ರವೇಶಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಕಾದು ಕುಳಿತ್ತಿದ್ದು, ಬೆಳ್ಳಂ ಬೆಳಗ್ಗೆ ವಾಹನಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಕೊಡಲೇ ಬೈಕ್ ಸವಾರರು ಕಾರು ಸವಾರರು ನಾ ಮುಂದು ತಾ ಮುಂದು ಅಂತ ನಂದಿಬೆಟ್ಟ ಏರಿದ್ದಾರೆ. ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲು ಸಾಲಾಗಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.
ಅಲ್ಲದೇ ಹೊಸ ವರ್ಷದ ಪಾರ್ಟಿ ಅಮಲಿನಲ್ಲಿ ಕಾರ್ ಹಾಗೂ ಬೈಕ್ ಅಪಘಾತ ಸಂಭವಿಸಿದ್ದು, ರಸ್ತೆ ಮಧ್ಯದಲ್ಲಿಯೇ ವಾಹನಗಳನ್ನು ಬಿಟ್ಟು ಹೋದ ಘಟನೆ ನಂದಿಗಿರಿಧಾಮದ ಕಾರಹಳ್ಳಿ ಕ್ರಾಸ್ ಬಳಿ ನಡೆದಿದೆ. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಕೋಡಾ ರ್ಯಾಪಿಟ್ ಕಾರ್ ಹಾಗೂ ಪಲ್ಸರ್ ಬೈಕ್ ನಡುವೆ ಅಪಘಾತ ಸಂಭವಿಸಿತು. ಅಪಘಾತದ ಬಳಿಕ ವಾಹನಗಳನ್ನು ರಸ್ತೆ ಮಧ್ಯದಲ್ಲಿ ಬಿಟ್ಟು ಚಾಲಕ ಹಾಗೂ ಸವಾರ ಪರಾರಿಯಾಗಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ, ಎಡಭಾಗದ ಡೋರ್ ಗೆ ಹೊಡೆತ ಬಿದ್ದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv