ಬೀದರ್: ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ(ಬ್ರಿಮ್ಸ್) ಗ್ರಹಣ ಬಡಿದಿದ್ದು, ಬ್ರಿಮ್ಸ್ ನ ಸಮಸ್ಯೆಗಳಿಗೆ ಯಾವಾಗ ಮುಕ್ತಿ ಸಿಗುತ್ತದೆ ಎನ್ನುವ ಹಾಗಾಗಿದೆ. ಇಲ್ಲಿ ಕುಡಿಯುವ ನೀರಿನ ಘಟಕಗಳಿದ್ದರೂ ಕೂಡ ಯಾವುದೇ ಪ್ರಯೋಜನ ಆಗುತ್ತಿಲ್ಲ.
ಬ್ರಿಮ್ಸ್ ನಲ್ಲಿ ಇರುವ ಸಮಸ್ಯೆಗಳಿಗೆ ಮುಗಿಯದ ಕಥೆಯಾಗಿ ಬಿಟ್ಟಿದೆ. ಒಂದು ಕಡೆ ಸರಿಯಾದ ವೈದ್ಯಕೀಯ ವ್ಯವಸ್ಥೆ ಸಿಗದೇ ಜನ ಪರದಾಡುತ್ತಿದ್ದರೆ, ಇನ್ನೊಂದೆಡೆ ಹೆಸರಿಗೆ ಮಾತ್ರ ಕುಡಿಯುವ ನೀರಿನ ಘಟಕಗಳಿವೆ. ಆದ್ರೆ ಅದರಲ್ಲಿ ನೀರೇ ಬರುತ್ತಿಲ್ಲ.
ಹೌದು. ಬ್ರಿಮ್ಸ್ ನಲ್ಲಿ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದ್ರೆ 1 ವರ್ಷದಿಂದ ಯಾವುದು ಕೆಲಸ ಮಾಡುತ್ತಿಲ್ಲ. ಈ ವೈದ್ಯಕೀಯ ಸಂಸ್ಥೆಯಲ್ಲಿ 500ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಅಧ್ಯಯನ ಮಾಡ್ತಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ಶುದ್ಧ ನೀರಿನ ಘಟಕಗಳನ್ನು ಹಾಕಲಾಗಿತ್ತು. ಆದರೆ ವರ್ಷದ ನಂತರ ಈ ಘಟಕಗಳಲ್ಲಿ ನೀರು ಸರಬರಾಜು ಆಗುತ್ತಿಲ್ಲ. ಸರ್ಕಾರ ಅಭಿವೃದ್ಧಿಗೆ ನೀಡಿದ ಹಣ ಎಲ್ಲಿ ಹೋಗುತ್ತಿದೆ? ಬ್ರಿಮ್ಸ್ ಸ್ಥಿತಿ ಯಾವಾಗ ಬದಲಾಗುತ್ತದೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಇತ್ತೀಚಿಗಷ್ಟೇ ಮಳೆಗೆ ವರ್ಷದ ಹಿಂದೆಯಷ್ಟೇ ನಿರ್ಮಿಸಿದ್ದ ಬ್ರಿಮ್ಸ್ ನ ಮುಂಭಾಗ ಕುಸಿದು ಬಿದ್ದಿತ್ತು. ಇದಾದ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ, ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಬ್ರಿಮ್ಸ್ ಗೆ ಭೇಟಿ ನೀಡಿದ್ದರು. ಈ ವೇಳೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸರ್ಕಾರ ಒದಗಿಸಿದ್ದ ಬೆಡ್ಗಳನ್ನು ಕೋಣೆಯೊಂದರಲ್ಲಿ ಕೂಡಿಟ್ಟು ಧೂಳು ಹಿಡಿಸಿದ್ದ ವಿಚಾರ ಬಯಲಾಗಿತ್ತು.
ಬ್ರಿಮ್ಸ್ ದುಸ್ಥಿತಿಯನ್ನು ಕಂಡು ಬೇಸತ್ತ ಸ್ಥಳೀಯರೊಬ್ಬರು ಸಚಿವರ ಭೇಟಿ ವೇಳೆ ಇಂಥ ಸಂಸ್ಥೆ ಯಾಕ್ ಬೇಕು? ಬೀಗ ಹಾಕ್ಕೊಂಡು ಹೋಗಿ ಅಂತ ಆರೋಗ್ಯ ಸಚಿವರ ಕೈಗೆ ಬೀಗ ಕೊಟ್ಟು ಅಸಮಾಧಾನವನ್ನು ಹೊರ ಹಾಕಿದ್ದರು.