ಕಾರವಾರ: (Karwar) ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ (Gokarna) ರಥ ಬೀದಿಯಲ್ಲಿ ಸಂಚರಿಸಬೇಕು ಎಂದರೆ ಇನ್ಮುಂದೆ ರಸ್ತೆಯಲ್ಲಿ ಅರೆಬರೆ ಬಟ್ಟೆ ಧರಿಸುವಂತಿಲ್ಲ.
ಹೌದು, ಹೀಗೆಂದು ದೇವಸ್ಥಾನದ ಪಕ್ಕದಲ್ಲಿ ಇರುವ ರಥ ಬೀದಿಯಿಂದ ಪಶ್ಚಿಮ ದ್ವಾರದವರೆಗೆ ಅರೆಬರೆ ಉಡುಪು ಧರಿಸಿ ಸಾರ್ವಜನಿಕರು ಸಂಚರಿಸಲು ನಿಷೇಧ ವಿಧಿಸಿ ಮಹಾಬಲೇಶ್ವರ ದೇವಸ್ಥಾನದ (Mahabaleshwara Temple) ಆಡಳಿತ ಕಮಿಟಿ ಸೂಚನಾ ಫಲಕ ಅಳವಡಿಸಿದೆ. ಕಮಿಟಿಯಿಂದ ಸೂಚನಾ ಫಲಕದ ಬ್ಯಾನರ್ ಅಳವಡಿಕೆಗೆ ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಶಿಕ್ಷಕನಿಗೆ ಬಿತ್ತು ಧರ್ಮದೇಟು
ರಥ ಬೀದಿಯಿಂದ ಕಡಲ ತೀರ ಹಾಗೂ ಇತರೆ ಸ್ಥಳಗಳಿಗೆ ಸಾರ್ವಜನಿಕರು ತೆರಳುವ ಪ್ರದೇಶ ಇದಾಗಿದ್ದು, ಗೋಕರ್ಣ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರ ಆಗಿರದೇ ಪ್ರವಾಸಿ ಸ್ಥಳವೂ ಸಹ ಆಗಿದೆ. ಹೀಗಿರುವಾಗ ದೇವಸ್ಥಾನದ ಒಳಗೆ ಮಾತ್ರ ಸೀಮಿತವಾಗಿದ್ದ ವಸ್ತ್ರ ಸಂಹಿತೆ (Dress Code) ಇದೀಗ ಸಾರ್ವಜನಿಕ ಪ್ರದೇಶಕ್ಕೂ ಅಳವಡಿಸಿರುವುದು ವಿವಾದ ಹುಟ್ಟುಹಾಕಿದೆ.
ಉಸ್ತುವಾರಿ ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ನೇತೃತ್ವದ ಎಂಟು ಜನರಿರುವ ಸಮಿತಿ ಇದಾಗಿದ್ದು, ಕುಮಟಾ ಎಸಿ, ಎಸ್ಪಿ ,ಡಿಸಿಗಳು ಸಹ ಕಮಿಟಿಯಲ್ಲಿದ್ದಾರೆ. ಆದರೆ ಜಿಲ್ಲಾಧಿಕಾರಿಗಳಿಗೆ ಖುದ್ದು ಕರೆಮಾಡಿ ಕೇಳಿದಾಗ ಅವರಿಗೂ ಸಹ ಮಾಹಿತಿ ಇರಲಿಲ್ಲ. ಇದಲ್ಲದೆ ಯಾವುದೇ ಆದೇಶ ಹೊರಡಿಸಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ದೇಶ ಕಾಯುವ ಯೋಧರಿಂದ್ಲೇ ನಾವು ಸುರಕ್ಷಿತ- ಮೃತ ಸೈನಿಕರ ಕುಟುಂಬಗಳಿಗೆ ಜೊಲ್ಲೆ ಸಾಂತ್ವನ
ಈ ಹಿಂದೆ ದೇವಸ್ಥಾನದಲ್ಲಿ ಮಾತ್ರ ವಸ್ತ್ರ ಸಂಹಿತೆ ಜಾರಿ ಮಾಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆದರೆ ಇದೀಗ ದೇವಸ್ಥಾನದ ಒಳಭಾಗದ ಜೊತೆ ಸಾರ್ವಜನಿಕ ಪ್ರದೇಶಕ್ಕೂ ಈ ರೀತಿ ಆದೇಶದ ಸೂಚನಾ ಫಲಕ ಅಳವಡಿಸಿದ್ದು, ಜನರ ತೀವ್ರ ವಿವಾದಕ್ಕೆ ಕಾರಣವಾಗಿದೆ.