ಹೈದರಾಬಾದ್: ವರದಕ್ಷಿಣೆ ಆಸೆಗೆ ವ್ಯಕ್ತಿಯೊಬ್ಬ ಹಂಡತಿಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿರುವ ಹೃದಯವಿದ್ರಾವಕ ಘಟನೆ ಮದನಪಲ್ಲಿ ಜಿಲ್ಲೆಯ ಕುರಬಲ ಕೋಟ ಮಂಡಲ್ ನಲ್ಲಿ ನಡೆದಿದೆ.
ಕೇವಲ ಐದು ತಿಂಗಳ ಹಿಂದೆ ಸೈಯದ್ ಬಾಷರವರು ತನ್ನ ಮಗಳು ಶಮಿನಾ(20)ಳನ್ನು ಆಂಗಲ್ಲು ಪಂಚಾಯ್ತಿ ಪ್ರದೇಶದ ನಂದಿರೆಡ್ಡಿಪಲ್ಲೆಯ ನಿವಾಸಿ ಎಸ್.ಕೆ.ಇಸ್ಮಾಯಿಲ್ ಎಂಬವನೊಂದಿಗೆ ಮದುವೆ ಮಾಡಿಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಯಾದ ದಿನದಿಂದ ಹೆಚ್ಚುವರಿ ವರದಕ್ಷಿಣೆ ತರುವಂತೆ ಶಮಿನಾ ಅತ್ತೆ ರೆಡ್ಡಿಬು ಮತ್ತು ಮಾವ ದಸ್ತಗಿರಿ ಇಬ್ಬರೂ ಕಿರುಕುಳ ನೀಡುತ್ತಿದ್ದರು. ಇದೇ ಸಂಬಂಧ ಗುರುವಾರ ಮಧ್ಯಾಹ್ನ ಶಮಿನಾಳಿಗೆ ಮತ್ತೆ ಕಿರುಕುಳ ನೀಡಿದ್ದು ಸಂಜೆ ಸುಮಾರು ಏಳು ಗಂಟೆಯ ಸಮಯಕ್ಕೆ ಎಸ್ಮಾಯಿಲ್ ಬೆಂಕಿ ಹಚ್ಚಿದ್ದಾನೆ. ಶಮಿನಾಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಶೇ.80 ರಷ್ಟು ದೇಹದ ಭಾಗ ಸುಟ್ಟಿದೆ ಮತ್ತು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಮದನಪಲ್ಲಿ ಎಸ್.ಐ. ವೆಂಕಟೇಶ್ವರುಲು ತಿಳಿಸಿದ್ದಾರೆ.
ಘಟನೆ ನಂತರ ಗ್ರಾಮಸ್ಥರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಮಿನಾಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಪೊಲೀಸರು ಇಸ್ಮಾಯಿಲ್ ಮತ್ತು ಅವನ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.