ಬೆಂಗಳೂರು: ಸ್ನೇಹಿತನ ಪಬ್ ಮೇಲೆ ಪೊಲೀಸ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಸುದ್ದಿಯಾಗಿದ್ದಾನೆ.
ಅನಧಿಕೃತ ಹಾಗೂ ಕಾನೂನುಬಾಹಿರವಾಗಿ ಪಬ್ ನಲ್ಲಿ ಯುವತಿಯರನ್ನು ಬಳಸಿಕೊಂಡಿದ್ದಕ್ಕೆ ಇಂದಿರಾನಗರದಲ್ಲಿರುವ ಪಬ್ ಮೇಲೆ ಜೀವನ್ ಭೀಮಾ ಪೊಲೀಸರು ದಾಳಿ ನಡೆಸಿದ್ದರು. ಈ ಪ್ರಕರಣ ಸಂಬಂಧ ಯಾರನ್ನೂ ಬಂಧಿಸದಂತೆ ನಲಪಾಡ್ ಹಿರಿಯ ಅಧಿಕಾರಿಗಳಿಂದ ಒತ್ತಡ ಹೇರುತ್ತಿರುವ ವಿಚಾರ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕ್ರಮದ ಫ್ಲೆಕ್ಸ್ ನಲ್ಲಿ ಆರೋಪಿ ನಲಪಾಡ್ ಮಿಂಚಿಂಗ್!
ನಲಪಾಡ್ ಸ್ನೇಹಿತ ಹರೀಶ್ಗೆ ಸೇರಿದ ಪಬ್ ವೊಂದಕ್ಕೆ ಜೀವನ್ ಭೀಮಾ ಪೊಲೀಸರು ದಾಳಿ ನಡೆಸಿ, ಹಲವರನ್ನು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸರ ಮೂಲಕ ಯಾರನ್ನೂ ಬಂಧಿಸಬೇಡಿ ಎಂದು ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾನೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ವಿದ್ವತ್ ಮೇಲೆ ಹಲ್ಲೆ ನಡೆಸಿ, 3 ತಿಂಗಳ ಜೈಲುವಾಸ ಅನುಭವಿಸಿ ಇತ್ತೀಚೆಗೆ ಜಾಮೀನಿನ ಮೇಲೆ ನಲಪಾಡ್ ಬಿಡುಗಡೆಯಾಗಿದ್ದ.
ಏನಿದು ಪಬ್ ದಾಳಿ?
ಇಂದಿರಾನಗರದ 80 ಅಡಿ ರಸ್ತೆಯಲ್ಲಿರುವ ಪಬ್ ನಲ್ಲಿ ಅನಧಿಕೃತವಾಗಿ ಯುವತಿಯರನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಗಳು ಕೇಳಿ ಬಂದಿತ್ತು. ಪಬ್ ನಲ್ಲಿ ಯುವತಿಯರಿಗೆ ತುಂಡು ಬಟ್ಟೆಗಳನ್ನು ನೀಡಿ ಅಶ್ಲೀಲ ನೃತ್ಯ ನಡೆಸಲಾಗುತ್ತಿದ್ದ ಕಾರಣ ಜೀವನ್ ಭೀಮಾ ನಗರ ಪೊಲೀಸರು ದಾಳಿ ನಡೆಸಿ, ಉತ್ತರ ಭಾರತದ 32 ಯುವತಿಯರನ್ನು ರಕ್ಷಣೆ ಮಾಡಿದ್ದು, ಪಬ್ ಮ್ಯಾನೇಜರ್ ಸೇರಿದಂತೆ ಒಟ್ಟು 6 ಮಂದಿಯನ್ನು ಬಂಧಿಸಿದ್ದರು.