ನವದೆಹಲಿ: ಮನೆಗೆಲಸದವಳ ಕೂದಲು ಕತ್ತರಿಸಿ ಅವಳನ್ನು ದಂಪತಿ ದೈಹಿಕವಾಗಿ ಹಿಂಸೆ ಮಾಡಿರುವ ಘಟನೆ ದೆಹಲಿಯ ರಜೌರಿ ಗಾರ್ಡನ್ನಲ್ಲಿ ನಡೆದಿದೆ.
ರಜೌರಿ ಗಾರ್ಡನ್ನಲ್ಲಿ ಮನೆಗೆಲಸ ಮಾಡುತ್ತಿದ್ದ ರಜನಿ(48)ಯನ್ನು ಮನೆಯ ಮಾಲೀಕ ಅಭಿನೀತ್ ಮತ್ತು ಅವನ ಹೆಂಡತಿ ಹಲ್ಲೆ ಮಾಡಿದ್ದಾರೆ. ಬಳಿಕ ರಜನಿಯನ್ನು ಪಕ್ಕದಲ್ಲಿದ್ದ ಆಫೀಸ್ ಬಳಿ ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆ ಅಲ್ಲೇ ಕೆಲಸ ಮಾಡುತ್ತಿದ್ದವರು ರಜನಿ ಮೂತ್ರದ ಕೊಳದಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ. ರಜನಿ ಅಲ್ಲಿಂದ ಎದ್ದೇಳಲು ಕಷ್ಟಪಡುತ್ತಿರುವುದನ್ನು ಕಂಡು ಸ್ಥಳೀಯರು ಸಫ್ದರ್ಜಂಗ್ ಆಸ್ಪತ್ರೆಗೆ ಸೇರಿಸಿದ್ದಾರೆ.
ರಜಿನಿಗೆ ಚಿಕಿತ್ಸೆ ನಡೆಯುತ್ತಿದ್ದು, ಈ ಕುರಿತು ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಆಸ್ಪತ್ರಗೆ ಧಾವಿಸಿದ್ದು, ರಜನಿಯನ್ನು ವಿಚಾರಣೆ ಮಾಡಿದ್ದಾರೆ. ಬಳಿಕ ಆಕೆಯಿಂದ ದೂರನ್ನು ಸ್ವೀಕರಿಸಿದ್ದಾರೆ. ರಜನಿಯ ಹೇಳಿಕೆಯ ಆಧಾರದ ಮೇಲೆ ಆರೋಪಿ ದಂಪತಿ ವಿರುದ್ಧ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಡಾಕ್ಟರ್ಗೆ ಡಿಗ್ರಿ ಕೊಟ್ಟವರು ಯಾರು – ಚೇತನಾ ರಾಜ್ ಸಾವಿಗೆ ಮರುಕ ವ್ಯಕ್ತಪಡಿಸಿದ ರಾಖಿ
ವೈದ್ಯರ ಪ್ರಕಾರ, ರಜನಿಗೆ ದೈಹಿಕವಾಗಿ ಹಿಂಸೆಯನ್ನು ನೀಡಲಾಗಿದೆ. ಆಕೆಯ ತಲೆ, ಕಣ್ಣುಗಳು, ಮುಖ, ಕೈಕಾಲುಗಳು, ಹೊಟ್ಟೆ ಮತ್ತು ದೇಹದ ಇತರ ಭಾಗಗಳ ಮೇಲೂ ಗಾಯಗಳಾಗಿವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ದಾಖಲೆಯಲ್ಲಿ ಏನಿದೆ?
ಸಂತ್ರಸ್ತೆ ರಜನಿ ಪಶ್ಚಿಮ ಬಂಗಾಳದ ಸಿಲಿಗುರಿಯವಳು. ದೆಹಲಿಯಲ್ಲಿ ಮನೆಗೆಲಸ ಮಾಡುತ್ತಿದ್ದಳು. ಆರೋಪಿ ದಂಪತಿ ಮಹಿಳೆಗೆ ತಿಂಗಳಿಗೆ 7,000 ನೀಡುತ್ತಿದ್ದರು. ಸದ್ಯ ಆಕೆ ಚಿಕಿತ್ಸೆ ಪಡೆಯುತ್ತಿದ್ದು, ಸಿಲಿಗುರಿಯಲ್ಲಿರುವ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಜನಿಯ ಮನೆಯ ಮಾಲೀಕ ಅಭಿನೀತ್ ಮತ್ತು ಅವನ ಹೆಂಡತಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ನನಗೆ ಕೂದಲನ್ನು ಕತ್ತರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.