ನಟ ಡಾಲಿ ಧನಂಜಯ್ ಈ ಹಿಂದೆ ‘ಬಡವರ ಮಕ್ಳು ಬೆಳಿಬೇಕು ಕಣ್ರಯ್ಯ’ ಎಂದು ಡೈಲಾಗ್ ಹೊಡೆದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅದು ಸಖತ್ ವೈರಲ್ ಕೂಡ ಆಗಿತ್ತು. ಬಡ ಪ್ರತಿಭಾವಂತರು ಯಾರೇ ಕಂಡರೂ, ಅವರಿಗೆ ಈ ಟ್ಯಾಗ್ ಹಾಕಿವೆ ಪೋಸ್ಟ್ ಮಾಡುವಂತಹ ಪರಿಹಾಠ ಬೆಳೆದಿತ್ತು. ಕೆಲ ವಿಷಯಗಳಲ್ಲಿ ಸ್ವತಃ ಡಾಲಿ ಅವರನ್ನೇ ಈ ಟ್ಯಾಗ್ ಹಾಕಿ ಟ್ರೋಲ್ ಮಾಡಿದ್ದು ಇದೆ. ಇದೀಗ ಈ ಮಾತನ್ನೇ ಇಟ್ಟುಕೊಂಡು ಕೆಲವರು ಧನಂಜಯ್ ಮೇಲೆ ಮುಗಿಬಿದ್ದಿದ್ದಾರೆ. ಕಾರಣ ಟಗರು ಪಲ್ಯ ಸಿನಿಮಾ.
ಟಗರು ಪಲ್ಯ ಸಿನಿಮಾದ ಮೂಲಕ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಅವರನ್ನು ಸಿನಿಮಾ ರಂಗಕ್ಕೆ ಪರಿಚಯಿಸುತ್ತಿದ್ದಾರೆ. ಮೊದಲ ಚಿತ್ರಕ್ಕೆ ಈ ಹುಡುಗಿಗೆ ಹತ್ತು ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ ಎನ್ನುವ ಸುದ್ದಿಯೂ ಇದೆ. ಈ ಆಯ್ಕೆಯನ್ನೇ ಹಲವರು ಧನಂಜಯ್ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಬಡವರು ಮಕ್ಳು ಬೆಳಿಬೇಕು ಅಂತ ಹೇಳಿದ ನೀವೇ, ನಟನೊಬ್ಬನ ಪುತ್ರಿಗೆ ಅವಕಾಶ ಕೊಟ್ಟಿದ್ದೀರಿ. ಬಡವರ ಮಕ್ಕಳನ್ನು ಯಾಕೆ ಆಯ್ಕೆ ಮಾಡಲಿಲ್ಲ ಎಂದು ಕೇಳಿದ್ದಾರೆ. ನೀವು ನೆಪೊಟಿಸಮ್ ಅನ್ನು ಬೆಂಬಲಿಸುತ್ತಿದ್ದೀರಿ ಎಂದೂ ಕೇಳಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಎರಡು ದಿನ ಟೆಲಿವಿಷನ್ ಕ್ರಿಕೆಟ್ ಲೀಗ್
ಈ ಪ್ರಶ್ನೆ ಡಾಲಿ ಖಡಕ್ಕಾಗಿಯೇ ಉತ್ತರ ನೀಡಿದ್ದಾರೆ. ಈ ಸಿನಿಮಾದ ನಿರ್ದೇಶಕರು ಸೆಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಹಂತ ಹಂತವಾಗಿ ಈ ಮಟ್ಟಕ್ಕೆ ಬಂದಿದ್ದಾರೆ. ಇದು ಅವರ ಮೊದಲ ಸಿನಿಮಾ ಎಂದು ಹೇಳುವ ಮೂಲಕ, ನೋಡುವ ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಿ ಎನ್ನುವ ಪರೋಕ್ಷ ಉತ್ತರ ನೀಡಿದ್ದಾರೆ. ಟಗರು ಪಲ್ಯ ಸಿನಿಮಾದ ನಿರ್ದೇಶಕ ಉಮೇಶ್ ಕೃಪಾ ಈ ಹಿಂದೆ ಹಲವು ಸಿನಿಮಾಗಳಲ್ಲಿ ಸೆಟ್ ಬಾಯ್ ಆಗಿ ಕೆಲಸ ಮಾಡಿದ್ದಾರಂತೆ. ಅಂತಹ ಪ್ರತಿಭಾವಂತನಿಗೆ ಡಾಲಿ ಅವಕಾಶ ನೀಡಿದ್ದಾರೆ.
ಅಂದಹಾಗೆ ಈ ಸಿನಿಮಾದಲ್ಲಿ ಅಮೃತಾ ಪ್ರೇಮ್ ನಾಯಕಿಯಾಗಿ ನಟಿಸುತ್ತಿದ್ದರೆ, ನಾಗಭೂಷಣ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ತಾರಾ ನಾಯಕನ ತಾಯಿ ಪಾತ್ರ ಮಾಡಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾಗೆ ಮುಹೂರ್ತ ಕೂಡ ನಡೆದಿದೆ. ಸದ್ಯ ಶೂಟಿಂಗ್ ನಲ್ಲಿ ಚಿತ್ರತಂಡ ತೊಡಗಿಕೊಂಡಿದೆ.