ಆನೆಕಲ್: ಹೊಟ್ಟೆ ನೋವು ಎಂದು ಬಳಲುತ್ತಿದ್ದ ಮಹಿಳೆಗೆ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಇಂಜೆಕ್ಷನ್ ನೀಡಿದಕ್ಕೆ ಮಹಿಳೆ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಮುತ್ತಗಟ್ಟಿ ಗ್ರಾಮದ ನಿವಾಸಿ ಮಂಗಳಮ್ಮ ಹೊಟ್ಟೆನೊವಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಪಟ್ಟಣದ ಆನೇಕಲ್ ಹೆಲ್ತ್ಕೇರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿತ್ತು. ವೈದ್ಯ ಡಾ. ಉಮೇಶ್ ಮಂಗಳಮ್ಮಗೆ ಇಂಜೆಕ್ಷನ್ ನೀಡಿದ್ದರು. ಇಂಜೆಕ್ಷನ್ ನೀಡಿದ 10 ನಿಮಿಷದಲ್ಲಿಯೇ ಮಂಗಳಮ್ಮ ಮೃತಪಟ್ಟಿದ್ದಾರೆ ಅಂತಾ ಅವರ ಸಂಬಂಧಿಗಳು ದೂರಿದ್ದಾರೆ.
ಮಹಿಳೆ ಮೃತ ಪಟ್ಟ ತಕ್ಷಣ ಕುಟುಂಬಸ್ಥರು ಗಲಾಟೆ ಪ್ರಾರಂಭಿಸಿದ್ದಾರೆ. ಸ್ವತಃ ವೈದ್ಯ ಉಮೇಶ್ ತನ್ನ ಖಾಸಗಿ ಆಸ್ಪತ್ರೆಯಿಂದ ಮಂಗಳಮ್ಮನನ್ನು ತುರ್ತು ಚಿಕಿತ್ಸೆನೀಡಬೇಕೆಂದು ಕಾರಣ ಹೇಳಿ ಮಂಗಳಮ್ಮ ಮೃತ ದೇಹವನ್ನು ಆನೇಕಲ್ ನ ಸರ್ಕಾರಿ ಆಸ್ಪತ್ರೆಗೆ 108 ಅಂಬುಲೆನ್ಸ್ ಮೂಲಕ ಕಳುಹಿಸಿದ್ದಾನೆ.
ಅತ್ತ ಮಂಗಳಮ್ಮ ಸಂಬಂಧಿಗಳು ಹೋಗುತ್ತಿದ್ದಂತೆ ಇತ್ತ ಡಾ. ಉಮೇಶ್ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದಾನೆ. ಇನ್ನು ಮೃತರ ಸಂಬಂಧಿಕರು ಆನೇಕಲ್ ಪೊಲೀಸ್ ಠಾಣೆಯಲ್ಲಿ ವೈದ್ಯ ಉಮೇಶ್ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಮಂಗಳಮ್ಮ ಸಾವಿನ ನಿಖರ ಕಾರಣ ತಿಳಿದುಬರಲಿದೆ.