– ಸಂಪೂರ್ಣವಾಗಿ ಸಗಣಿಯಿಂದ ಕಾರು ಶೃಂಗಾರ
ಮುಂಬೈ: ಸಾಮಾನ್ಯವಾಗಿ ಮದುವೆಯಾದ ಮಗಳನ್ನು ವಿವಿಧ ಹೂಗಳಿಂದ ಅಲಂಕಾರಗೊಂಡ ಕಾರಿನ ಮೂಲಕ ಪತಿಯ ಮನೆಗೆ ಪೋಷಕರು ಕಳುಹಿಸಿಕೊಡುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ತಮ್ಮ ಮಗಳನ್ನು ಸಗಣಿ ಬಳಿದ ಕಾರಿನಲ್ಲಿ ಪತಿಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದ ವೈದ್ಯ ನವನಾಥ್ ದೂಧಾಲ್ ತನ್ನ ಮಗಳನ್ನು ಸಗಣಿ ಬಳಿದ ಕಾರಿನಲ್ಲಿ ಗಂಡನ ಮನೆಗೆ ಕಳುಹಿಸಿದ್ದಾರೆ. ದೂಧಾಲ್ ಅವರು ತಮ್ಮ ಟೊಯೊಟಾ ಕಾರನ್ನು ಸಂಪೂರ್ಣವಾಗಿ ಹಸುವಿನ ಸಗಣಿಯಿಂದ ವಿಭಿನ್ನವಾಗಿ ಅಲಂಕಾರಗೊಳಿಸಿದ್ದರು. ನಂತರ ಮಗಳನ್ನು ಅದರಲ್ಲಿಯೇ ಪತಿಯ ಮನೆಗೆ ಕಳುಹಿಸಿದ್ದಾರೆ.
ವೈದ್ಯ ಸಗಣಿಯ ಪ್ರಯೋಜನದ ಬಗ್ಗೆ ಜನರಿಗೆ ತಿಳಿಸುವ ಕಾರಣದಿಂದ ತಮ್ಮ ಟೊಯೊಟಾ ಕಾರನ್ನು ಸಗಣಿಯಿಂದ ಅಲಂಕರಿಸಿದ್ದರು. ಸಗಣಿಯ ಜೊತೆಗೆ ಮೇಲೆ ಹೂಗಳಿಂದ ಕೂಡ ಅಲಂಕಾರ ಮಾಡಲಾಗಿದೆ. ಅಲ್ಲದೇ ಕಾರಿನ ಮೇಲೆ ನವದಂಪತಿ ಫೋಟೋ ಮತ್ತು ಹೆಸರನ್ನು ಕೂಡ ಬರೆಯಲಾಗಿದೆ. ನವದಂಪತಿ ಸಗಣಿ ಬಳಿದ ಕಾರಿನ ಮುಂದೆ ನಿಂತುಕೊಂಡು ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.
ಮದುವೆಗೆ ಬಂದಿದ್ದವರು ಕಾರನ್ನು ಸಗಣಿಯಿಂದ ಅಲಂಕಾರ ಮಾಡಿರುವುದನ್ನು ನೋಡಿ ಮುಖ ಸಿಂಡರಿಸಿಕೊಂಡಿದ್ದರು. ಆದರೆ ವೈದ್ಯ ಸಗಣಿಯಿಂದ ಹಲವು ಔಷಧಿಯ ಗುಣಗಳಿವೆ. ಮೊದಲಿಗೆ ಸಗಣಿ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ. ಜೊತೆಗೆ ಮನುಷ್ಯನ ದೇಹದಲ್ಲಿರುವ ಎಲ್ಲಾ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಸಗಣಿಗೆ ಇದೆ ಎಂದು ದೂಧಾಲ್ರವರು ತಿಳಿಸಿದ್ದಾರೆ.
ಸಾಮಾನ್ಯವಾಗಿ ವಾತಾವರಣದಲ್ಲಿನ ತಾಪಮಾನ ಹೆಚ್ಚಾಗುತ್ತಿದೆ. ಆದರೆ ದೇಶಿಯ ಹಸುಗಳ ಸಗಣಿಯಿಂದ ತಾಪಮಾನವನ್ನು ಕಡಿಮೆ ಮಾಡಬಹುದು. ಹೀಗಾಗಿ ಕಾರಿನ ಹೊರ ಭಾಗಕ್ಕೆ ಸಗಣಿ ಬಳಿಯುವುದರಿಂದ ಕಾರಿನ ಒಳಭಾಗದಲ್ಲಿ ವಾತಾವರಣವು ತಣ್ಣಗಾಗಲಿದೆ. ಅಷ್ಟೇ ಅಲ್ಲದೇ ಸಗಣಿಯೂ ಕಾರಿನಲ್ಲಿರುವವರನ್ನು ರೇಡಿಯೇಷನ್ನಿಂದ ಕಾಪಾಡುತ್ತದೆ. ಕಾರಿಗೆ ಈ ರೀತಿ ಸಗಣಿಯನ್ನು ಮೆತ್ತುವುದರಿಂದ ಕೇವಲ ಮೂರು ಬಕೆಟ್ ನೀರಿನಲ್ಲಿ ಕಾರನ್ನು ತೊಳೆಯಬಹುದು. ಹೀಗಾಗಿ ನೀರನ್ನು ಸಹ ಉಳಿತಾಯ ಮಾಡಬಹುದಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಕಾರಿಗೆ ಇದೇ ಮೊದಲ ಬಾರಿಗೆ ಸಗಣಿ ಬಳಿದಿಲ್ಲ. ಕಳೆದ ವರ್ಷದ ಬೇಸಿಗೆಯಲ್ಲಿ ಭಾರತದ ವಿವಿಧ ಭಾಗಗಳಲ್ಲಿ ತಾಪಮಾನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅನೇಕ ಕಾರುಗಳಿಗೆ ಸಗಣಿಯನ್ನು ಬಳಿಯಲಾಗಿತ್ತು. ಇದರಿಂದ ಕಾರಿನ ಕ್ಯಾಬಿನ್ ತಣ್ಣಗಿರುತ್ತಿತ್ತು. ಇದಕ್ಕೆ ಇದುವರೆಗೂ ಯಾರೂ ವೈಜ್ಞಾನಿಕ ಕಾರಣವನ್ನು ತಿಳಿಸಿಲ್ಲ. ಆದರೆ ವೈದ್ಯ ದೂಧಾಲ್ರವರು ಹೇಳಿರುವಂತೆ ಸಗಣಿಯು ರೇಡಿಯೇಷನ್ನಿಂದ ಕಾಪಾಡುವುದರ ಬಗ್ಗೆ ಇನ್ನಷ್ಟೇ ಸಾಬೀತಾಗಬೇಕಿದೆ.