ನವದೆಹಲಿ : ಕಳೆದ ಐದು ದಿನಗಳಿಂದ ದೆಹಲಿಯಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಪಕ್ಷದ ಅಧಿನಾಯಕಿ ಸೋನಿಯಗಾಂಧಿ ಭೇಟಿಗೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ದೆಹಲಿ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಸೋನಿಯಗಾಂಧಿ ಇದುವರೆಗೂ ಭೇಟಿಗೆ ಅವಕಾಶ ನೀಡಿಲ್ಲ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಲು ಡಿ.ಕೆ ಶಿವಕುಮಾರ್ ಪ್ರಯತ್ನಪಟ್ಟಿದ್ದರು. ಕೆ.ಸಿ ವೇಣುಗೋಪಾಲ್, ಅಹ್ಮದ್ ಪಟೇಲ್ ಭೇಟಿಯಾಗಿದ್ದ ಅವರು, ಉಭಯ ನಾಯಕ ಸಲಹೆ ಮೇರೆಗೆ ಸೋನಿಯಾ ಭೇಟಿಗೆ ಯತ್ನಿಸಿದರು.
ಈ ಸಂಬಂಧಿಸಿದಂತೆ ದೆಹಲಿಯಲ್ಲಿ ಮಾತನಾಡಿರುವ ಡಿ.ಕೆ ಶಿವಕುಮಾರ್, ಪಾರ್ಟಿ ಮತ್ತು ಅಧ್ಯಕ್ಷರ ವಿಷಯವನ್ನು ದಯವಿಟ್ಟು ನನ್ನ ಹತ್ತಿರ ಕೇಳಬೇಡಿ. ನೀವು ಏನು ಬೇಕಾದರೂ ಸುದ್ದಿ ಮಾಡಿಕೊಳ್ಳಿ. ನಾನು ಯಾರ ಮೇಲೆ ಯುದ್ಧಕ್ಕೂ ಹೋಗುವುದಿಲ್ಲ. ಯಾರ ಮೇಲೆ ಸ್ಪರ್ಧೆನೂ ಮಾಡುವುದಿಲ್ಲ, ನಾನು ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಭೇಟಿ ಮಾಡಿಲ್ಲ ಯಾವ ಲೀಡರ್ ಮನೆಗೂ ಹೋಗಿಲ್ಲ. ಕೇವಲ ಸೌಜನ್ಯಕ್ಕಾಗಿ ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದೇನೆ ಎಂದು ತಿಳಿಸಿದರು.
ದೆಹಲಿಯಲ್ಲಿ ನನ್ನ ಕೇಸುಗಳಿಗೆ ಸಂಬಂಧಿಸಿದ ಕೆಲಸ ಮಾತ್ರ ಮಾಡುತ್ತಿದ್ದು, ಹೈಕಮಾಂಡ್ ಕರೆದು ಕೇಳಿದರೆ ಮಾತಾಡುತ್ತೇನೆ. ಇದುವರೆಗೂ ನನ್ನ ಯಾರೂ ಕರೆದು ಕೇಳಿಲ್ಲ ಸೋನಿಯಾ ಗಾಂಧಿ ಭೇಟಿಗೆ ಪ್ರಯತ್ನಿಸಬಹುದಿತ್ತು ಸದ್ಯಕ್ಕೆ ಬೇಡ ಅಂತಾ ಬಿಟ್ಟಿದ್ದೀನಿ ಎಂದರು.
ಸಿದ್ದರಾಮಯ್ಯ-ಖರ್ಗೆ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಭೇಟಿ ಮಾಡಿದರೆ ತಪ್ಪೇನಿದೆ ಎಂದು ಮರು ಪ್ರಶ್ನಿಸಿದರು. ಜಾತಿ, ಜಿಲ್ಲೆ, ರಾಜ್ಯಗಳ ವಿಷಯಕ್ಕೆ ಬೇರೆ ಪಕ್ಷಗಳ ನಾಯಕರನ್ನೇ ಭೇಟಿ ಮಾಡುತ್ತೇವೆ. ನಾನು ಕೂಡ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದೇನೆ. ಅದರಲೇನೂ ವಿಶೇಷ ಇಲ್ಲ ಡಿಕೆಶಿ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಭೂಮಿ ಪೂಜೆ ವಿಚಾರ ಸಂಬಂಧ ಮಾತನಾಡಿ, ಕನಕಪುರ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜ್ ಮಂಜೂರಾಗಿದನ್ನು ರದ್ದು ಮಾಡಿ ಚಿಕ್ಕಬಳ್ಳಾಪುರಕ್ಕೆ ನೀಡಿದ್ದಾರೆ. ಬಿಎಸ್ವೈ ವೈರತ್ವದ ರಾಜಕೀಯ ಮಾಡಲ್ಲ ಎಂದವರು ಈಗ ಮಾಡ್ತಿರುವುದು ಏನು? ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜ್ ನೀಡಿದಕ್ಕೆ ಆಕ್ಷೇಪ ಇಲ್ಲ. ಅದು ದೊಡ್ಡ ಜಿಲ್ಲೆ ಅಲ್ಲಿರೊರು ನಮ್ಮ ಜನ, ನಾನ್ಯಾಕೆ ಬೇಡ ಎನ್ನಲ್ಲಿ. ಆದರೆ ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ತಡೆಬಾರದಿತ್ತು. ಕೆಲವರು ರಾಜಕೀಯ ಮಾಡಬೇಕು ಅನ್ಕೊಂಡಿದ್ದಾರೆ ಮಾಡಲಿ ಎಂದು ಸುಧಾಕರ್ ವಿರುದ್ಧ ಹರಿಹಾಯ್ದ ಡಿಕೆಶಿ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡ್ತಿನಿ ಎಂದರು.