ಬೆಂಗಳೂರು: ಹವಾಲ ಅಂದ್ರೆ ಏನು ಅಂತಾ ನನಗೆ ಗೊತ್ತಿಲ್ಲ. ಆರೋಪ ಮಾಡಿದರೆ ಅಷ್ಟೇ ಸಾಲದು ಸೂಕ್ತ ಸಾಕ್ಷಿ ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಐಟಿ ದಾಳಿಯ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಐಟಿ ಅಧಿಕಾರಿಗಳು ನ್ಯಾಯಸಮ್ಮತವಾಗಿ ಕೆಲಸ ಮಾಡುತ್ತಿದ್ದಾರೋ? ಇಲ್ಲವೋ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ನಾನು ತಪ್ಪು ಮಾಡಿದ್ದರೆ ಹೆದರಬೇಕು. ಆದರೆ ಅಧಿಕಾರ ಇದೆ ಎನ್ನುವ ಕಾರಣಕ್ಕೆ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಹಾಕಿ ಬಂಧಿಸಬಹುದೇ ವಿನಃ ಏನು ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಗೆ ಬಲ ತುಂಬುತ್ತಿರುವ ನನ್ನನ್ನು ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಹತ್ತಿಕ್ಕಲು ಬಿಜೆಪಿ ನಾಯಕರು ಐಟಿ ದಾಳಿ ತಂತ್ರ ಬಳಸುತ್ತಿದ್ದಾರೆ. ಇದು ರಾಜ್ಯದ ಜನತೆಗೆ ಗೊತ್ತಿರುವ ವಿಚಾರ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬಲಿಷ್ಠ ನಾಯಕರನ್ನು ಹತ್ತಿಕ್ಕಲು ಬಿಜೆಪಿ ರಾಷ್ಟ್ರೀಯ ನಾಯಕರು ಐಟಿ ದಾಳಿ ಬಳಸುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದರು.
ಯಾರದ್ದೋ ಮನೆಯಲ್ಲಿ ಹಣ ಸಿಕ್ಕಿರುವ ಹಣಕ್ಕೆ ನಾವು ಹೇಗೆ ಸಂಬಂಧ ಪಡುತ್ತೇವೆ. ಯಾರ ಮನೆಯಲ್ಲಿ ಹಣ ದೊರೆತಿದೆಯೋ ಅವರ ವಿರುದ್ಧ ಐಟಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಅಲ್ಲದೇ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ನಡೆಸಿದ ವೇಳೆ ದೊರೆತ ಹಣ ಹಾಗೂ ಆಸ್ತಿಗಳಿಗೆ ಸೂಕ್ತ ದಾಖಲೆಯನ್ನು ಅವರು ನೀಡುತ್ತಾರೆ. ಇದನ್ನು ಹೊರತು ಪಡಿಸಿ ಯಾವುದೇ ಪ್ರಕರಣಗಳು ನಮಗೆ ಸಂಬಂಧಿಸಿದಲ್ಲ ಎಂದು ಸ್ಪಷ್ಟನೆ ನೀಡಿದರು.
ಹವಾಲ ಆರೋಪ ಸಾಬೀತು ಮಾಡಲು, ಹಣ ನೀಡಿದವರು ಹಾಗೂ ಪಡೆದವರು ಬೇಕಾಗುತ್ತದೆ. ಐಟಿ ಅಧಿಕಾರಿಗಳು ದಾಳಿ ಮಾಡಿರುವ ಮನೆ ಹಾಗೂ ಹಣ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ್ದಲ್ಲ. ಅವರಿಗೆ ಸೇರಿರುವ ಆರೋಪಗಳಿಗೆ ಸೂಕ್ತ ದಾಖಲೆ ನೀಡುತ್ತಾರೆ ಎಂದು ಸಂಸದರು ಪ್ರತಿಕ್ರಿಯಿಸಿದರು.
ಐಟಿ ದಾಳಿಯ ವೇಳೆ ದೊರೆತ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗ ಪಡಿಸುತ್ತಾರೆ. ಅಂತೆ ಡಿ.ಕೆ.ಶಿವಕುಮಾರ್ ಮನೆ ಮೇಲಿನ ದಾಳಿಯ ವೇಳೆ ದೊರೆತಿರುವ ದಾಖಲೆಗಳನ್ನು ಬಹಿರಂಗ ಪಡೆಸಬೇಕು. ಏಕೆಂದರೆ ಅದರಲ್ಲಿ ಬಿಜೆಪಿ ನಾಯಕರ ಹಗರಣಗಳ ಪಟ್ಟಿಯೇ ಇದೆ ಎಂದರು.