ನವದೆಹಲಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಬಂಧನ ವಿರೋಧಿಸಿ ಇಂದು ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯದ ನಾಯಕರು ನಡೆಸಿದ ಪ್ರತಿಭಟನೆಗೆ ಸಂಸದ ಡಿಕೆ ಸುರೇಶ್ ಅವರು ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ನಾಳೆ ಇಡಿ ವಿಚಾರಣೆಗೆ ಎದುರಿಸಲಿರುವ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಧೈರ್ಯದಿಂದ ವಿಚಾರಣೆ ಎದುರಿಸಲಿದ್ದಾರೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಡಿಕೆಶಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಶಾಂತಿಯಿಂದ ನಡೆದಿದೆ. ಸಮಾಜದ ಸಾಕಷ್ಟು ಗಣ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿ ನಮಗೆ ಬೆಂಬಲ ನೀಡಿದ್ದಾರೆ. ಪರಿಣಾಮ ನಮಗೆ ಮತ್ತಷ್ಟು ಕಾನೂನು ಹೋರಾಟವನ್ನು ಮಾಡುವ ಆತ್ಮಸ್ಥೈರ್ಯ ನೀಡಿದೆ ಎಂದರು. ಇದನ್ನು ಓದಿ: ಪ್ರತಿಭಟನೆಗೆ ಬಿಜೆಪಿ ಒಕ್ಕಲಿಗ ನಾಯಕರು ಬೆಂಬಲ ನೀಡಿದ್ರು: ಕರವೇ ನಾರಾಯಣಗೌಡ
ಇದೇ ವೇಳೆ ನಾಳೆ ವಿಚಾರಣೆಗೆ ಎದುರಿಸಲಿರುವ ಐಶ್ವರ್ಯ ಅವರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನಿಗೆ ತಲೆಬಾಗಿ ವಿಚಾರಣೆ ಎದುರಿಸಬೇಕು. ನಾನೇ ವಿಚಾರಣೆ ಎದುರಿಸುತ್ತೇನೆ ಎಂದು ಐಶ್ವರ್ಯ ಹೇಳಿದ್ದು, ತುಂಬಾ ಆತ್ಮವಿಶ್ವಾಸದಲ್ಲಿದ್ದಾಳೆ. ಐಶ್ವರ್ಯ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ವಿಚಾರಣೆ ಎದುರಿಸುತ್ತಿರುವುದು ಇದೇ ಮೊದಲಲ್ಲ. ನಮ್ಮ ಕುಟುಂಬದ ಯಾರೇ ಆದ್ರು ವಿಚಾರಣೆ ಎದುರಿಸುತ್ತೇವೆ. ಡಿಕೆ ಶಿವಕುಮಾರ್ ಅವರು ಐಶ್ವರ್ಯ ಅವರಿಗೆ ಏಕೆ ಬರುತ್ತಿಯಾ? ಬರಬೇಡ ಎಂದು ಹೇಳಿದ್ದರು. ಆತ್ಮವಿಶ್ವಾಸದಿಂದ ಇರುವ ಅವರು ತನ್ನ ಮೇಲಿನ ವಿಚಾರಣೆ ಎದುರಿಸುತ್ತೇನೆ ಎಂದು ಹೇಳಿದ್ದಾರೆ. ಈಗಾಗಲೇ ಅವರ ಹೆಸರಿನಲ್ಲಿ ಇರುವ ಆಸ್ತಿಯ ಮಾಹಿತಿಯನ್ನು ಪ್ರತಿ ಚುನಾವಣಾ ಸಂದರ್ಭದಲ್ಲಿ ಲೋಕಾಯುಕ್ತ ಹಾಗೂ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ ಎಂದರು. ಇದನ್ನು ಓದಿ: ಡಿಕೆಶಿ ಎರಡನೇ ಸಿದ್ಧಾರ್ಥ್ ಆಗಬಾರದು: ನಂಜಾವಧೂತ ಸ್ವಾಮೀಜಿ
ಇಂದು ನಡೆದ ಪ್ರತಿಭಟನೆಯ ಬಗ್ಗೆ ಡಿಕೆಶಿವಕುಮಾರ್ ಆಂತಕಗೊಂಡಿದ್ದರು. ದೊಡ್ಡ ಮಟ್ಟದಲ್ಲಿ ನಡೆದ ಪ್ರತಿಭಟನೆಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಎಂಬ ಆತಂಕ ಅವರಿಗೆ ಇತ್ತು. ಆದ್ದರಿಂದಲೇ ನಿನ್ನೆ ಶಾಂತಿಯುತ ಪ್ರತಿಭಟನೆಗೆ ಕರೆಕೊಟ್ಟಿದ್ದರು. ಇಂದಿನ ಶಾಂತಿಯುತವಾಗಿ ನಡೆದ ಕಾರಣ ಡಿಕೆಶಿ ಅವರಿಗೆ ಖುಷಿಯಾಗಿದೆ. ಅವರು ಆರೋಗ್ಯವಾಗಿದ್ದು, ಇಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಜನರ ಬೆಂಬಲ ನೋಡಿ ಅವರ ಆತ್ಮ ವಿಶ್ವಾಸ ಹೆಚ್ಚಿದೆ. ಮುಂದಿನ ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು. ಇದನ್ನು ಓದಿ: ಪ್ರತಿಭಟನೆಗೆ ನನಗೆ ಆಹ್ವಾನ ನೀಡಿಲ್ಲ: ಎಚ್.ಡಿ ಕುಮಾರಸ್ವಾಮಿ