ಬೆಂಗಳೂರು: ಉಡುಪಿಯಲ್ಲಿ ಆರಂಭಗೊಂಡ ಹಿಜಬ್ ಕಿತ್ತಾಟ ಈಗ ರಾಜ್ಯದ ಹಲವು ಭಾಗಗಳಿಗೂ ವ್ಯಾಪಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೂ ಒಳಗಾಗಿದೆ. ಇದರ ಮಧ್ಯೆಯೇ ರಾಜಕೀಯ ಕೂಡ ಸುಳಿದಿದೆ. ಹಿಜಬ್ ವಿಚಾರದಲ್ಲೂ ಕಾಂಗ್ರೆಸ್ ಬಣ ರಾಜಕೀಯ ನಡೆದಿದೆ.
ಹಿಜಬ್ ಪರ ಬ್ಯಾಟ್ ಬೀಸಿರೋ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಜಬ್ ಹಾಕುವುದು ಮೂಲಭೂತ ಹಕ್ಕು. ಇಷ್ಟು ವರ್ಷಗಳಿಂದ ಇಲ್ಲದ್ದು ಈಗೇಕೆ ವಿವಾದ..? ಇದು ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನ ತಡೆಯುವ ಪ್ರಯತ್ನ ಎಂದು ಆರೋಪಿಸಿದ್ದಾರೆ. ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲ್ ಹೆಣ್ಣುಮಕ್ಕಳನ್ನ ಗೇಟಲ್ಲೇ ತಡೆದಿದ್ದು ಅಮಾನವೀಯ.. ಕೂಡ್ಲೇ ಅವರ ವಿರುದ್ಧ ಕ್ರಮ ಆಗ್ಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಲೋಕಸಭೆ ಕಲಾಪದಲ್ಲಿ ಹಿಜಬ್ ಚರ್ಚೆ – ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಆಗ್ರಹ
ಅಸಲಿಗೆ ಪಿಯುಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಅಂತಾ ಸರ್ಕಾರ ಎಲ್ಲೂ ಹೇಳಿಲ್ಲ. ರಘುಪತಿ ಭಟ್ ಯಾರು ಯುನಿಫಾರ್ಮ್ ತನ್ನಿ ಅನ್ನೋಕೆ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ. ಈ ಬೆಳವಣಿಗೆ ಸಂವಿಧಾನ ವಿರೋಧಿ ನಡೆ. ಕೇಸರಿ ಶಾಲು ಹಾಕಿಕೊಂಡು ಬರ್ತಿರೋ ಉದ್ದೇಶ ಏನು..? ಕೇಸರಿ ಶಾಲು ಹಾಕೋ ಪದ್ಧತಿ ಯಾವಾಗಿನಿಂದ ಬಂತು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಲೇಜುಗಳಲ್ಲಿ ಮುಂದಿನ ವರ್ಷದಿಂದ ಏಕರೂಪ ಸಮವಸ್ತ್ರ ನಿಯಮ ಜಾರಿ
ಬಿಜೆಪಿಯವರು ಇದನ್ನೆಲ್ಲಾ ಮಾಡಿಸುತ್ತಿದ್ದಾರೆ. ಚುನಾವಣೆ ಹತ್ತಿರವಾಗ್ತಿರುವಂತೆಯೇ ಈ ತರಹದ ವಿಷಯಗಳನ್ನು ಮುನ್ನೆಲೆಗೆ ತರ್ತಾರೆ ಎಂದು ಸಿದ್ದರಾಮಯ್ಯ ಆಪಾದಿಸಿದ್ದಾರೆ. ಇನ್ನು ಹಿಜಾಬ್ ವಿವಾದದ ಹಿಂದೆ ಸರ್ಕಾರದ ಕುಮ್ಮಕ್ಕಿದೆ. ಗೃಹ ಸಚಿವರೇ ಹಿಜಬ್, ಕೇಸರಿ ಎರಡೂ ಹಾಕ್ಬೇಡಿ ಅಂದ್ರೆ ಏನರ್ಥ ಎಂದು ಶಾಸಕ ಜಮೀರ್ ಗರಂ ಆಗಿದ್ದಾರೆ. ದೇಶ ಎಲ್ಲಿಗೆ ಹೋಗ್ತಿದೆ, ಏನಾಗ್ತಿದೆ ಎಂಬುದನ್ನು ನನಪಿಸಿಕೊಂಡ್ರೇ ನೋವಾಗುತ್ತೆ. ರಾಜಕೀಯಕ್ಕಾಗಿ ವಿದ್ಯಾರ್ಥಿಗಳನ್ನ ಬಳಸಿಕೊಳ್ಳುವುದು ತಪ್ಪು ಎಂದಿದ್ದಾರೆ.
ಇದೇ ವೇಳೆ ಯುಟಿ ಖಾದರ್ ಮಾತಾಡಿ, ಹಿಜಬ್ ವಿಚಾರದಲ್ಲಿ ಸರ್ಕಾರ ಬೇಗ ತೀರ್ಮಾನ ತಗೋಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಇವರೆಲ್ಲರ ಹೇಳಿಕೆಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಪ್ರಕರಣ ಕೋರ್ಟ್ನಲ್ಲಿ ಇರುವಾಗ ಪಕ್ಷದ ಅಧ್ಯಕ್ಷನಾಗಿ ಅಭಿಪ್ರಾಯ ಹೇಳುವುದಕ್ಕೆ ಆಗಲ್ಲ. ಇದೊಂದು ಸೂಕ್ಷ್ಮ ವಿಚಾರ. ಹೀಗಾಗಿ ಚರ್ಚೆ ಮಾಡಿ ಪ್ರತಿಕ್ರಿಯಿಸಬೇಕಾಗುತ್ತದೆ. ಪಕ್ಷದ ಯಾರು ಕೂಡ ಇದರ ಬಗ್ಗೆ ಬಹಿರಂಗ ಚರ್ಚೆ ಮಾಡಬಾರ್ದು ಎಂದು ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಮತ್ತು ಅವರ ಬಣದ ನಾಯಕರ ಪ್ರತಿಕ್ರಿಯೆಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ: ಕುಂದಾಪುರ ಕಾಲೇಜಿಗೆ ನಾಳೆ ರಜೆ