ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡು ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ ಪಕ್ಷದ ಶಾಸಕರ ಮನವೊಲಿಸಿ ಕರೆತರಲು ನಾಳೆ ಮುಂಬೈಗೆ ತೆರಳುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲವನ್ನು ಆರಂಭ ಮಾಡಿರುವ ಬಿಜೆಪಿ ಶಾಸಕರು ಈಗ ಏನು ತಿಳಿಯದಂತೆ ಮಾತನಾಡುತ್ತಿದ್ದಾರೆ. ಆದ್ದರಿಂದ ನನ್ನ ಸ್ನೇಹಿತರು, ಶಾಸಕರನ್ನು ಭೇಟಿ ಮಾಡಲು ನಾಳೆ ಮುಂಬೈಗೆ ತೆರಳುತ್ತೇನೆ. ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರು ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕರು. ಪಕ್ಷ ಸಂಕಷ್ಟದಲ್ಲಿ ಇದ್ದ ವೇಳೆ ಅವರು ಹೆಗಲು ನೀಡಿ ನಿಂತಿದ್ದರು. ಆದರೆ ಇಂದು ಅವರು ಅಸಮಾಧಾನ ಹೊಂದಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದರು.
ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಶಾಸಕರು ಹೇಳಿದ್ದಾರೆ. ಅದರಲ್ಲೂ ಸೋಮಶೇಖರ್ ಅವರು ಪಕ್ಷದ ಪರ ಸಂಕಷ್ಟದ ಸಮಯದಲ್ಲಿ ಕೆಲಸ ಮಾಡಿದ್ದರು. ಅವರೊಂದಿಗೆ ಕೆಲವೊಂದು ವೈಯಕ್ತಿಕ ವಿಚಾರಗಳನ್ನು ಮಾತನಾಡುವ ಅಗತ್ಯವಿದೆ. ಆದ್ದರಿಂದ ನಾನು ಅವರ ಭೇಟಿಗೆ ತೆರಳುತ್ತೇನೆ ಎಂದರು. ಅಲ್ಲದೇ ಇದೇ ಸಂದರ್ಭದಲ್ಲಿ ರಿವರ್ಸ್ ಆಪರೇಷನ್ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾರು ಏನು ಮಾತನಾಡುತ್ತಾರೆ ಮಾತನಾಡಲಿ. ಜನರನ್ನು ತಪ್ಪು ದಾರಿಗೆ ಎಳೆಯುವ ಅವರ ಯತ್ನ ಸಫಲ ಆಗುವುದಿಲ್ಲ ಎಂದರು.
ಕೆಲವರಿಗೆ ಕೆಲವು ಸಮಸ್ಯೆಗಳಿರುತ್ತವೆ, ಹಾಗೆಯೇ ನನಗೂ ಹೊಟ್ಟೆ ನೋವು ಇದ್ದು, ಔಷಧಿ ತೆಗೆದುಕೊಳ್ಳುತ್ತಿದ್ದೇನೆ. ಅದರಂತೆ ಶಾಸಕರಿಗೂ ಕೆಲವು ಅಸಮಾಧಾನಗಳಿವೆ. ಶಾಸಕ ಸ್ಥಾನಕ್ಕೆ ಆಯ್ಕೆ ಆಗಿರುವ 224 ಮಂದಿಯೂ ನನಗೆ ಸ್ನೇಹಿತರಾಗಿದ್ದು, ಎಲ್ಲರೂ ನನ್ನ ಬಳಿ ಅವರ ಕೆಲಸ ಮಾಡಿಕೊಳ್ಳಲು ಬರುತ್ತಾರೆ. ಆದರೆ ನಾನು ಎಂದು ಅವರ ಬಳಿ ಅಭಿವೃದ್ಧಿ ವಿಚಾರ ಬಿಟ್ಟು ರಾಜಕೀಯ ಮಾತನಾಡಿಲ್ಲ. ಯಾರು ಏನು ಮಾತನಾಡುತ್ತಾರೆ ಎಲ್ಲವನ್ನು ನಾನು ಹೇಳಿಕೊಳ್ಳುತ್ತೇನೆ ಎಂದರು.