ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಈ ಬಾರಿ ಗೆಲ್ಲಿಸಿ ಸಿಎಂ ಮಾಡಿ. ಇದರೊಂದಿಗೆ ನಮ್ಮನ್ನು ಗೆಲ್ಲಿಸಿ ಮುಂದೇ ನಾವು ಸಿಎಂ ಆಗಬಾರದೇ ಎಂದು ಪ್ರಶ್ನಿಸುವ ಮೂಲಕ ಡಿಕೆ ಶಿವಕುಮಾರ್ ತಮ್ಮ ಕನಸನ್ನು ಬಿಚ್ಚಿಟ್ಟಿದ್ದಾರೆ.
ಜಿಲ್ಲೆಯ ಎಚ್ಡಿ ಕೋಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಎಲ್ಲರೂ ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗಬೇಕು ಎನ್ನುತ್ತಾರೆ ಆದರೆ ಅವರು ಸಿಎಂ ಆಗಿದ್ದಾರೆ. ಬಳಿಕ ನಮ್ಮನ್ನು ಗೆಲ್ಲಿಸಿ ಮುಂದೇ ನಾವು ಸಿಎಂ ಆಗಬಾರದೇ ಎಂದು ಕೇಳಿದರು. ಈ ಮೂಲಕ ಹಾಸ್ಯದಾಟಿಯಲ್ಲಿ ಸಿಎಂ ಆಗುವ ಆಸೆಯನ್ನು ಜನರ ಮುಂದೆ ಬಿಚ್ಚಿಟ್ಟರು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೆಚ್ ಡಿ ಕೋಟೆಯಲ್ಲಿ ಚಿಕ್ಕಮಾದು ಪುತ್ರ ಅನಿಲ್ ಚಿಕ್ಕಮಾದು ಗೆಲುವು ಪಡೆಯುತ್ತಾರೆ. ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಮತ ಕೇಳುವ ಯಾವ ಹಕ್ಕು ಇಲ್ಲ. ಬಿಜೆಪಿ ಪಕ್ಷದ ನಾಯಕರು ಡೋಂಗಿಗಳು. ಈ ಬಾರಿ ಜೆಡಿಎಸ್ ಗೆಲ್ಲೋದೆ 20 ರಿಂದ 25 ಸೀಟುಗಳು ಅಷ್ಟೇ. ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಮಾಡಿಕೊಂಡಿವೆ ಎಂದು ಗಂಭಿರ ಆರೋಪ ಮಾಡಿದರು.
ರೆಡ್ಡಿಯಿಂದ ಬಿಎಸ್ವೈ ಜೈಲಿಗೆ: ಯಡಿಯೂರಪ್ಪ ಅವರ ಜೊತೆ ಮುನಿಸಿಕೊಂಡಿದ್ದ ಎಲ್ಲಾ ನಾಯಕರು ಇದೀಗ ಒಂದಾಗಿದ್ದಾರೆ. ರೆಡ್ಡಿ ಅವರಿಂದಲೇ ಬಿಎಸ್ವೈ ಜೈಲಿಗೆ ಹೋಗಿದ್ದು, ಆದರೆ ಈಗ ಎಲ್ಲರೂ ಒಂದಾಗಿದ್ದಾರೆ. ಪ್ರಧಾನಿ ಮೋದಿ ಏನು ಮಾತಾಡಲ್ಲ ಅವರು ಏನು ಕೆಲಸ ಮಾಡಲ್ಲ. ಬರಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.