ಧಾರವಾಡ: ಖೇಲೋ ಇಂಡಿಯಾ ಕ್ರೀಡಾಕೂಟದ ಜಿಮ್ನಾಸ್ಟಿಕ್ನಲ್ಲಿ ಧಾರವಾಡ ಯುವಕ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಆಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಧಾರವಾಡ ಅಮೃತ ಮುದ್ರಬೆಟ್ಟ ಅವರು ಚಿನ್ನದ ಪದಕ ಪಡೆದಿದ್ದಾರೆ. ಜಿಮ್ನಾಸ್ಟಿಕ್ನ ಫ್ಲೋರ್ ಎಕ್ಸಸೈಜ್ ವಿಭಾಗದಲ್ಲಿ ಚಿನ್ನ ಪದಕ ಗಳಿಸಿ ಕೀರ್ತಿ ತಂದಿದ್ದಾರೆ.
ಧಾರವಾಡದ ಬಾಲ ಮಾರುತಿ ಜಿಮ್ನಾಸ್ಟಿಕ್ನ ಕ್ರೀಡಾಪಟುವಾಗಿರುವ ಮುದ್ರಬೆಟ್ಟ ಅವರು, ಖೇಲೋ ಇಂಡಿಯಾದ ಜಿಮ್ನಾಸ್ಟಿಕ್ ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಉಳಿದಂತೆ ಜಿಮ್ನಾಸ್ಟಿಕ್ನ ಫ್ಲೋರ್ ಎಕ್ಸಸೈಜ್ನಲ್ಲಿ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದ ಕ್ರೀಡಾಪಟುಗಳು ಕ್ರಮವಾಗಿ 2 ಮತ್ತು 3ನೇ ಪಡೆದುಕೊಂಡಿದ್ದಾರೆ.
ಅಮೃತ ಮುದ್ರಬೆಟ್ಟ ಅವರು ಚಿನ್ನ ಗೆಲ್ಲುತಿದ್ದಂತೆಯೇ ತಂದೆ ನಾಗೇಶ್ ಅವರೊಂದಿಗೆ ಮಾತನಾಡಿ ಸಂತಸ ಹಂಚಿಕೊಂಡಿದ್ದಾರೆ. ಮುದ್ರಬೆಟ್ಟ ಅವರ ಸಾಧನೆಗೆ ಇಡೀ ಕುಟುಂಬ ಸಂತಸ ವ್ಯಕ್ತಪಡಿಸಿದೆ. ಅಮೃತ ಮುದ್ರಬೆಟ್ಟ ಅವರು ಟೆಬಲ್ ವಾಲ್ಟ್ ಹಾಗೂ ಪಾಮೆಲ್ ಹಾರ್ಸ್ ಪಂದ್ಯ ಕೂಡಾ ಆಡಲಿದ್ದು, ಅದರಲ್ಲಿ ಕೂಡಾ ಟಾಪ್ 8 ರಲ್ಲಿದ್ದಾರೆ ಎಂದು ನಾಗೇಶ್ ಅವರು ಮಾಹಿತಿ ನೀಡಿದರು. ಈ ವಿಭಾಗಳಲ್ಲಿ ಅಮೃತ ಬೆಟ್ಟ ಅವರು ಚಿನ್ನ ಗೆಲ್ಲಲಿ ಎಂದು ಕುಟುಂಬಸ್ಥರು ಆಶಯ ವ್ಯಕ್ತಪಡಿಸಿದ್ದಾರೆ.