ಧಾರವಾಡ: ಅನಾರೋಗ್ಯ ಪೀಡಿತ ರಾಷ್ಟ್ರ ಪಕ್ಷಿ ನವಿಲು ಮೃತಪಟ್ಟ ಹಿನ್ನೆಲೆ ಧಾರವಾಡದ ಗ್ರಾಮವೊಂದರಲ್ಲಿ ಅದಕ್ಕೆ ಸಕಲ ಗೌರವ ನೀಡಿ ವಿಧಿ ವಿಧಾನಗಳಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ನವಲಗುಂದ ತಾಲೂಕಿನ ಬ್ಯಾಲಾಳ ಗ್ರಾಮದ ನೀರಿನ ಟ್ಯಾಂಕ್ನ ಮೇಲೆ ಅಸ್ವಸ್ಥಗೊಂಡಿದ್ದ ನವಿಲೊಂದು ಪತ್ತೆಯಾಗಿತ್ತು. ಇದನ್ನು ನೋಡಿದ ಗ್ರಾಮಸ್ಥರು ಅದಕ್ಕೆ ಆರೈಕೆ ಮಾಡಿ ನೀರು ಕುಡಿಸಿ, ಆಹಾರ ಕೊಟ್ಟಿದ್ದಾರೆ. ಆದರೆ ಇದ್ಯಾವುದಕ್ಕೂ ಸ್ಪಂದಿಸದ ನವಿಲು ಕೆಲ ಸಮಯದ ನಂತರ ಅಸುನೀಗಿದೆ.
ನವಿಲು ರಾಷ್ಟ್ರ ಪಕ್ಷಿಯಾದ್ದರಿಂದ ಗ್ರಾಮಸ್ಥರೆಲ್ಲರೂ ಸೇರಿ ಅದಕ್ಕೆ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿ, ಅದರಂತೆ ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರೆಲ್ಲರು ಸೇರಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. ಈ ವೇಳೆ ರಾಷ್ಟ್ರಗೀತೆಯನ್ನು ಹೇಳಿ ನವಿಲಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ.