ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ-ಇಂಗ್ಲಿಷ್ ಶಾಲೆಗಳ ಬಗ್ಗೆ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಮಾತಿಗೆ ಸಿಎಂ ಕುಮಾರಸ್ವಾಮಿ ಗರಂ ಆದ ಘಟನೆ ನಡೆದಿದೆ.
ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಗಳನ್ನ ಹೇಗೆ ಸಬಲೀಕರಣ ಮಾಡಬೇಕು ಅಂತ ಹಿಂದಿನ ಸಿಎಂಗೆ ಹೇಳಿದ್ದೆವು. ಮೈತ್ರಿ ಸರ್ಕಾರಕ್ಕೆ ಮೈತ್ರಿ ಎಂಬ ಧರ್ಮ ಇದ್ದರೆ ಹಳೇ ಯೋಜನೆಗಳನ್ನ ಮುಂದುವರಿಸುವುದು ಧರ್ಮ ಅಂದ್ರು.
ಇದಕ್ಕೆ ಸಿಡಿಮಿಡಿಗೊಂಡ ಸಿಎಂ, ಮೈತ್ರಿ ಧರ್ಮ ಪಾಲನೆ ಮಾಡಲು ಸಿದ್ಧನಿದ್ದೇನೆ. ಕಂಬಾರರು ಭಾಷಣದಲ್ಲಿ ಕೊಟ್ಟ ಮಾಹಿತಿಯಂತೆ ಭಾಷೆ ರಕ್ಷಣೆಗೆ ನಾನು ಬದ್ಧ. ನಿರ್ಣಯ ಮಾಡಿ, ಕಾನೂನು ತರೋಣ ಎಂದು ಹೇಳಿದರು. ಇದೇ ವೇಳೆ, ಬಡ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ನೀಡುವುದರ ಹಿಂದೆ ಬಡಮಕ್ಕಳ ಬಡತನ ಹೋಗಲಾಡಿಸುವ ಉದ್ದೇಶ ಇದೆ. ಐದಾರು ದಿನಗಳಲ್ಲಿ ಸಮಸ್ಯೆ ಬಗ್ಗೆ ಸಭೆ ಕರೆಯುತ್ತೇನೆ ಎಂದು ಹೇಳಿದರು.
11 ಗಂಟೆಗೆ ಬರಬೇಕಿದ್ದ ಸಿಎಂ 3 ಗಂಟೆ ತಡವಾಗಿ ಆಗಮಿಸಿದರು. ಇದಕ್ಕೆ ಸಂಸದ ಪ್ರಹ್ಲಾದ್ ಜೋಷಿ ಆಕ್ಷೇಪ ವ್ಯಕ್ತಪಡಿಸಿದ್ರು. ಉದ್ಘಾಟನೆಗೆ ಮುನ್ನ ಸಮ್ಮೇಳನದ ಅಧ್ಯಕ್ಷರಾದ ಚಂದ್ರಶೇಖರ ಕಂಬಾರ ದಂಪತಿ, ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ಸುಳ್ವಾಡಿ ವಿಷ ಪ್ರಸಾದ ದುರಂತದಿಂದ ಎಚ್ಚೆತ್ತಿರುವ ಸರ್ಕಾರ ಸಮ್ಮೇಳನದಲ್ಲಿ ಊಟದ ವ್ಯವಸ್ಥೆಯ ಬಗ್ಗೆ ನಿಗಾ ವಹಿಸಿದೆ. ಅಕ್ಷರ ಜಾತ್ರೆಗೆ ಬರುವ ಹೊಸ ಸಾಹಿತ್ಯಾಸಕ್ತರಿಗೆ ನೋಂದಣಿ ಬಂದ್ ಮಾಡಲಾಗಿತ್ತು. ಈ ವಿಚಾರಕ್ಕೆ ಸಾಹಿತ್ಯ ಆಸಕ್ತರು ಪ್ರತಿಭಟಿಸಿದರು.
ಈ ಮಧ್ಯೆ, ಒಂದು ಸಾವಿರ ಇಂಗ್ಲೀಷ್ ಮಾಧ್ಯಮ ಶಾಲೆ ತೆರೆಯುವ ಪ್ರಸ್ತಾಪ ಸರ್ಕಾರದ ಮುಂದಿದೆ. ಇದಕ್ಕೆ ಸಾಹಿತಿಗಳ ವಿರೋಧ ಇದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv