ಧಾರವಾಡ: ಕುಟುಂಬ ರಾಜಕಾರಣದ ವಿರುದ್ಧ ಸಾಹಿತಿ ಕುಂ. ವೀರಭದ್ರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಕ್ಕಳು, ಮೊಮ್ಮಕ್ಕಳು ಮಾತ್ರ ಶಾಸಕರು ಆಗಬೇಕಾ? ರಾಜಕಾರಣ, ವಿಧಾನಸಭೆ ಅಂದ್ರೆ ಅವರಪ್ಪನ ಮನೆ ಆಸ್ತಿಯೇ ಎಂದು ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ನಡೆದ ‘ಪ್ರತ್ಯೇಕ ರಾಜ್ಯ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನನಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯಿದೆ. ಆದರೆ ಅವರೇ ವಿಧಾನಸೌಧದಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಬೇರೆಯವರಿಗೆ ಸ್ಪರ್ಧಿಸುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ ಅವರು, ಯುವಕರು ಅಧಿಕಾರಕ್ಕೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ವಿಧಾನಸೌಧ ಬಿಗ್ ಬಜಾರ್ ಹಾಗೂ ಮಾಲ್ ಹಂತಕ್ಕೆ ತಲುಪಿ, ಶಾಸಕರನ್ನು ಖರೀದಿಸುವ ಮಾರುಕಟ್ಟೆಯಾಗಿದೆ. ಯಾರು ಬೇಕಾದರೂ 20 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣ ನೀಡಿ ಅಧಿಕಾರದ ಗದ್ದುಗೆ ಏರಬಹುದು. ಶಾಸಕರನ್ನು ಬಚ್ಚಿಟ್ಟು ರಾಜಕಾರಣ ಮಾಡಿದರೆ, ರಾಜ್ಯ ಉದ್ದಾರ ಆಗುವುದಿಲ್ಲ. ಬಚ್ಚಿ ಇಡಲು ಶಾಸಕರು ಕುರಿ, ಕೋಳಿ, ನಾಯಿಗಳೇ ಎಂದು ವ್ಯಂಗ್ಯವಾಡಿದರು.
ಬೆಂಗಳೂರಿನ ಸದಾಶಿವ ನಗರ, ಡಾಲರ್ಸ್ ಕಾಲನಿಗಳಲ್ಲಿ ಉತ್ತರ ಕರ್ನಾಟಕ ಭಾಗದ ಮುಟ್ಟಾಳ ಜನಪ್ರತಿನಿಧಿಗಳೇ ತುಂಬಿದ್ದಾರೆ. ಅವರು ಉತ್ತರ ಕರ್ನಾಟಕ ಅಭಿವೃದ್ಧಿಗೆ ಬರುವ ಅನುದಾನವನ್ನು ಹಂಚಿಕೊಂಡು, ಅಲ್ಲಿ ಹೋಗಿ ಮನೆ ಮಾಡುತ್ತಿದ್ದಾರೆ. ಒಬ್ಬೊಬ್ಬ ಶಾಸಕರಿಗೆ ಕನಿಷ್ಠ ಹತ್ತು ಸೈಟ್ಗಳಿವೆ. ಹೀಗೆ ಬಿಟ್ಟರೆ ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ರಾಜಕಾರಣಿಗಳೇ ತುಂಬಿಕೊಳ್ಳುತ್ತಾರೆ. ನಮ್ಮ ಭಾಗದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಹೇಳಿದರು.
ಜನಪ್ರತಿನಿಧಿಗಳು ತಪ್ಪು ಮಾಡಿದಾಗ ಅವರ ಕೊರಳ ಪಟ್ಟಿ ಹಿಡಿದು, ಕಪಾಳಕ್ಕೆ ಹೊಡೆಯುವ ಅಧಿಕಾರ ಜನರಿಗೆ ಕೊಡಬೇಕಿದೆ. ರಾಜಕಾರಣಿಗಳು ಇಂದು ನಮಗೆ ದುಸ್ವಪ್ನಗಳಾಗಿ ಕಾಡುತ್ತಿದ್ದಾರೆ. ಅವರ ಕಾಟವಿಲ್ಲದೆ ನೆಮ್ಮದಿಯಿಂದ ಮಲಗಬೇಕಾದರೆ ಒಂದು ಕ್ವಾಟರ್ ಹಾಕಲೇಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv