ಧಾರವಾಡ: ಧಾರವಾಡದ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಹಾಫ್ ಐರಾನ್ ಮ್ಯಾನ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಮುರುಘೇಶ್ ಚನ್ನಣ್ಣವರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದ ಐರಾನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ದೇಶದ 1,600 ಕ್ರೀಡಾಪಟುಗಳು ಭಾಗವಹಿಸಿದ್ದು, ಅವರನ್ನು ಹಿಂದಿಕ್ಕಿ ಮುರುಘೇಶ್ ಹಾಫ್ ಐರಾನ್ ಮ್ಯಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
7 ತಾಸಿನಲ್ಲಿ 1.9 ಕಿ.ಮೀ ಈಜು, 91 ಕಿ.ಮೀ ಸೈಕ್ಲಿಂಗ್ ಹಾಗೂ 21.1 ಕಿ.ಮೀ ರನ್ನಿಂಗ್ ಮಾಡುವ ಮೂಲಕ ಮುರುಘೇಶ್ ಚನ್ನಣ್ಣವರ ಅವರು ರಾಜ್ಯದ ಮೊದಲ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ.
ಮುರುಘೇಶ್ ಚನ್ನಣ್ಣವರ ಈಗಾಗಲೇ ಸೈಕ್ಲಿಂಗ್, ಮ್ಯಾರಾಥಾನ್ ನಲ್ಲಿ 60ಕ್ಕೂ ಹೆಚ್ಚು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಈ ಮೊದಲು ಇವರು 42 ಕಿ.ಮೀ ಮ್ಯಾರಾಥಾನ್, 100 ಕಿ.ಮೀ ಸೈಕ್ಲಿಂಗ್ನಲ್ಲಿ ಕೂಡ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.