ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ, ಇದೀಗ ಯಾರು ಗುರು? ಯಾರು ಗುರು ಅಲ್ಲ ಅನ್ನೋ ಚರ್ಚೆಗೆ ಚಾಮರಾಜನಗರ ಲೋಕಸಭಾ ಕ್ಷೇತ್ರ ವೇದಿಕೆಯಾಗಿದೆ.
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ನನ್ನ ಗುರುಗಳು ಅಲ್ಲ. ನನ್ನ ಗುರು ರಾಜಶೇಖರಮೂರ್ತಿ ಅವರು ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧೃವನಾರಯಣ್ ಹೇಳಿದ್ದಾರೆ.
ನಾನು ಮೊದಲು ಶಾಸಕನಾದಾಗ ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್ಸಿನಲ್ಲಿ ಇರಲಿಲ್ಲ. ನಾನು ಸಂತೇಮರಹಳ್ಳಿ ಕ್ಷೇತ್ರದಲ್ಲಿ ಗೆದ್ದಾಗ ಅವರು ಜೆಡಿಎಸ್ನಲ್ಲಿ ಇದ್ದರು. ನನ್ನನ್ನು ರಾಜಕೀಯವಾಗಿ ರಾಜಶೇಖರಮೂರ್ತಿ ಅವರು ಬೆಳೆಸಿದ್ದಾರೆ. ನಾನು ಮೊದಲ ಬಾರಿ ಗೆದ್ದಾಗ ಇಡೀ ಜಿಲ್ಲೆಯಲ್ಲಿ ನಾನು ಒಬ್ಬನೇ ಕಾಂಗ್ರೆಸ್ ಶಾಸಕನಾಗಿದ್ದೆ. ನಾನು ಗೆದ್ದಾಗ ಅವರು ಕಾಂಗ್ರೆಸ್ಸಿನಲ್ಲಿ ಇರಲೇ ಇಲ್ಲ. ಪ್ರಸಾದ್ ಅವರು 2004 ಆದ ಮೇಲೆ ಕಾಂಗ್ರೆಸ್ಸಿಗೆ ಬಂದಿದ್ದಾರೆ ಎಂದು ಧೃವನಾರಯಣ್ ನೇರವಾಗಿ ಶ್ರೀನಿವಾಸ್ ಪ್ರಸಾದ್ ನನ್ನ ಗುರುವಲ್ಲ ಎಂದು ಹೇಳಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್ಸಿಗೆ ಬಂದಾಗ ಹಿರಿಯ ನಾಯಕರು ಎಂದು ಗೌರವ ಕೊಡುತ್ತಿದ್ದೆ ಅಷ್ಟೇ. ಶ್ರೀನಿವಾಸ್ ಪ್ರಸಾದ್ ಅವರು ಪಕ್ಷ ಬಿಡುವವರೆಗೂ ಹಿರಿಯ ನಾಯಕರು ಎಂದು ಜೊತೆ ಗೌರವವಾಗಿ ಇದ್ದೆ. ಆದರೆ ಅವರು ನನ್ನ ಗುರುಗಳು ಅಲ್ಲ, ನನ್ನ ಗುರು ರಾಜಶೇಖರಮೂರ್ತಿ ಅವರು ಎಂದರು.