ಮಂಗಳೂರು: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ.
ಶಬರಿಮಲೆಗೆ ಹೋಗುವುದರಲ್ಲಿ 48 ದಿವಸಗಳ ವ್ರತ ನಿಯಮ ಇದೆ. ಮನೋನಿಗ್ರಹ, ಸಂಯಮದ ಪಾಲನೆ ವ್ರತದ ಹಿನ್ನೆಲೆಯಲ್ಲಿರುತ್ತೆ. ವ್ರತ ನಿಷ್ಠರು ಬ್ರಹ್ಮಚರ್ಯ ಪಾಲಿಸಬೇಕೆಂಬ ನೆಲೆಯಲ್ಲಿ ಮಹಿಳೆಯರು ಮಾಡಿದ ಆಹಾರವನ್ನೂ ಸೇವಿಸುವುದಿಲ್ಲ ಅಂದ್ರು.
ಮಹಿಳೆಯರು ಶಬರಿಮಲೆ ಪ್ರವೇಶವನ್ನು ನಿರ್ಬಂಧಿಸೋದು ಬೇರೆ ವಿಚಾರ. ಆದ್ರೆ ಈ ಸಾಂಪ್ರದಾಯಿಕ ಸೌಂದರ್ಯವನ್ನು ಉಳಿಸಿಕೊಳ್ಳಬೇಕು. ಹಾಗಂತ, ಮಹಿಳೆಯರು ದೇಗುಲಕ್ಕೆ ಹೋಗಬಾರದು ಅಂತಲ್ಲ. ಹೋದ್ರೆ ಏನಾಗುತ್ತೆ ಅನ್ನೋ ಪ್ರಶ್ನೆ ಏಳಬಹುದು. ಹೋದ್ರೆ ಏನೂ ಆಗಲ್ಲ. ಆದ್ರೆ ಅದರ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಬೇಕು. ಈಗ ಶಬರಿಮಲೆಗೆ ಹೋಗುವ 48 ದಿವಸವನ್ನು 4 ದಿನಕ್ಕೆ ಮಾಡಿದ್ರು. ಅದನ್ನೂ ಬರೀ ಎರಡೇ ದಿವಸಕ್ಕೆ ವೃತ ಹಾಕಿ ಹೋದ್ರೂ ಆಗುತ್ತೆ ಅನ್ನೋದನ್ನು ಯಾರು ಮಾಡಿದ್ರು ಅಂತ ಪ್ರಶ್ನಸಿದ ಅವರು, ಇವೆಲ್ಲವೂ ಪರಿವರ್ತನೆ. ಇದು ತಪ್ಪು. 48 ದಿವಸಗಳ ಕಾಲ ತಣ್ಣೀರಲ್ಲಿ ಸ್ನಾನ ಮಾಡಿ, ಅವನು ಮನೋನಿಗ್ರಹ ಮಾಡಿಕೊಂಡು, ಅವನ ಆಹಾರದಲ್ಲಿ ಪಥ್ಯ ಮಾಡಿಕೊಳ್ಳಬೇಕು. ಈ ಮೂಲಕ ಆತನ ವ್ಯಕ್ತಿತ್ವದಲ್ಲಿ ತೇಜಸ್ಸನ್ನು ಹೆಚ್ಚಿಸಿಕೊಳ್ಳಬೇಕು. ಯಾರೂ 48 ದಿವಸದ ವೃತವನ್ನು ಮಾಡುತ್ತಾರೋ ಅವರಿಗೆ ಅದ್ಭುತವಾದ ತೇಜಸ್ಸು, ಶಕ್ತಿ ಬರುತ್ತದೆ ಅಂತ ಹೇಳಿದ ಅವರು, ಮೂಲ ಉದ್ದೇಶ ಉಳಿಸಿಕೊಂಡರೆ ಒಳ್ಳೆಯದು ಅಂತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.
ಕ್ಷೇತ್ರದ ಮೂಲ ಉದ್ದೇಶ, ಪಾವಿತ್ರ್ಯಕ್ಕೆ ಧಕ್ಕೆ ತರುವಂತಾಗಬಾರದು. ಸಾಂಪ್ರದಾಯಿಕ ಆಚರಣೆ ಕ್ಷೇತ್ರಕ್ಕೊಂದು ಸೌಂದರ್ಯ. ಇಂಥ ನಿಷೇಧ ಪದ್ಧತಿ ವಿದೇಶಗಳಲ್ಲೂ ಇರುವುದನ್ನು ಕಂಡಿದ್ದೇನೆ. ಭಕ್ತಿಯಿದ್ದರೆ ಕ್ಷೇತ್ರಕ್ಕೇ ಹೋಗಬೇಕಾಗಿಲ್ಲ. ಮನೆಯಲ್ಲಿಯೂ ದೇವರ ಆರಾಧನೆ ಮಾಡಬಹುದು ಅಂತ ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಶಬರಿಮಲೆ ಪ್ರವೇಶ ವಿಚಾರದಲ್ಲಿ ಚರ್ಚೆ ನಡೀತಿರುವ ಮಧ್ಯೆ ಹೆಗ್ಗಡೆಯವರು ನೀಡಿದ ಪರಂಪರೆ ಉಳಿಸಿಕೊಳ್ಳಬೇಕೆಂಬ ಹೇಳಿಕೆ ಮಹತ್ವ ಪಡೆದಿದೆ.
ನೂತನ ಮ್ಯೂಸಿಯಂಗೆ ಸಿಎಂ ಚಾಲನೆ:
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬುಧವಾರ ಧರ್ಮಸ್ಥಳಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಧರ್ಮಸ್ಥಳದಲ್ಲಿ ನೂತನ ವಸ್ತುಸಂಗ್ರಹಾಲಯಕ್ಕೆ ಚಾಲನೆ ನೀಡಲಿದ್ದಾರೆ. ಹೊಸ ಕಟ್ಟಡದಲ್ಲಿ ನವೀಕರಣಗೊಂಡ ಮಂಜೂಷಾ ಮ್ಯೂಸಿಯಂನಲ್ಲಿ ಇತಿಹಾಸಪೂರ್ವ ವಸ್ತುಗಳನ್ನು ಜೋಪಾನ ಮಾಡಲಾಗಿದೆ. ವಿದೇಶ ಪ್ರವಾಸದ ವೇಳೆ ಸಂಗ್ರಹಿಸಿದ ಸಾವಿರಾರು ವಸ್ತುಗಳಿವೆ. 200 ವರ್ಷಗಳ ಹಿಂದಿನ ವಸ್ತುಗಳು ಸಂಗ್ರಹಾಲಯದಲ್ಲಿದೆ ಅಂತ ಅವರು ತಿಳಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv