ಗುರುವಾರ ಬೆಳಗ್ಗೆ 8:04ಕ್ಕೆ ಕೇತುಗ್ರಸ್ತ ಸೂರ್ಯಗ್ರಹಣ ಆರಂಭವಾಗಲಿದ್ದು, ಬೆಳಗ್ಗೆ 11:04 ಗಂಟೆಗೆ ಮುಕ್ತಾಯವಾಗುತ್ತದೆ. ಈ ಬಾರಿ ಮೂಲ ನಕ್ಷತ್ರ ಧನಸ್ಸು ರಾಶಿಯಲ್ಲಿ ಗ್ರಹಣವಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ದೋಷ ಪರಿಹಾರಕ್ಕೆ ಯಾವ ಮಂತ್ರ ಪಠಿಸಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ರಾಜ್ಯದ ಎಲ್ಲೆಲ್ಲಿ ಗ್ರಹಣ ಗೋಚರ?
ಮಂಗಳೂರು – ಶೇ. 93.04
ಮೈಸೂರು – ಶೇ.94
ಶಿವಮೊಗ್ಗ – ಶೇ. 89.86
ಬೆಂಗಳೂರು – ಶೇ. 89.54
ಹುಬ್ಬಳ್ಳಿ – ಶೇ. 86.24
ಬೀದರ್ – ಶೇ. 74.40
ವಿಜಯಪುರ -ಶೇ. 80.64
ಸೂರ್ಯಗ್ರಹಣ ಕಾಲದಲ್ಲಿ ಏನು ಮಾಡಬಾರದು?
ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು, ಯಾಕೆಂದರೆ ಗರ್ಭಿಣಿಯರ ಮೇಲೆ ಸೂರ್ಯನ ಕಿರಣ ಬಿದ್ದಾಗ ಮಗುವಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿದ್ರೆ, ಸ್ನಾನ, ಊಟ, ಪ್ರಯಾಣ ಮಾಡಬಾರದು. ದೇವತಾ ವಿಗ್ರಹಗಳನ್ನು ಮುಟ್ಟಬಾರದು, ವ್ಯವಹಾರಗಳಿಗೆ ಒಪ್ಪಂದ ಮಾಡಿಕೊಳ್ಳಬಾರದು. ವ್ಯಾಪಾರ-ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಬೇಕು. ಬರೀಗಣ್ಣಿನಿಂದ ಸೂರ್ಯ ಗ್ರಹಣ ನೋಡಬಾರದು.
ಗ್ರಹಣದ ನಂತರ ಏನು ಮಾಡಬೇಕು?
ಗ್ರಹಣ ಮೋಕ್ಷದ ನಂತರ ಕಡ್ಡಾಯವಾಗಿ ಸ್ನಾನ ಮಾಡಬೇಕು. ಹರಿಯುವ ನೀರಿನಲ್ಲಿ ಅಥವಾ ತಣ್ಣೀರಿನಿಂದ ಸ್ನಾನ ಮಾಡಬೇಕು. ಸ್ನಾನದ ನಂತರ ಆಹಾರ ಸೇವನೆ ಮಾಡಬಹುದು. ಈ ವೇಳೆ ಜಪ-ತಪ, ಧ್ಯಾನ, ಮಂತ್ರೋಪದೇಶ, ಪಿತೃದರ್ಪಣ ಮಾಡುವುದು ಒಳಿತು.
ಗ್ರಹಣಾಚರಣೆಯ ಕ್ರಮವೇನು?
ಗ್ರಹಣ ಸ್ಪರ್ಶಕಾಲದಲ್ಲಿ ಸ್ನಾನ ಮಾಡಬೇಕು. ಬಳಿಕ ಗ್ರಹಣ ಸಮಯದಲ್ಲಿ ದೇವರ ಸ್ತೋತ್ರಗಳನ್ನು ಪಠಿಸಬೇಕು. ಮನೆಯ ದೇವರಿಗೆ ವಿಶೇಷ ಪೂಜೆ-ಪ್ರಾಥನೆ ಮಾಡಬೇಕು. ನಂತರ ಗ್ರಹಣ ಮೋಕ್ಷ ಕಾಲದ ಬಳಿಕ ಪುನಃ ಸ್ನಾನ ಮಾಡಿ, ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ಪೂಜೆ ಮಾಡಬೇಕು. ಆ ನಂತರ ಆಹಾರ ಸೇವನೆ ಮಾಡಬೇಕು.
ಗ್ರಹಣ ದೋಷ ಪರಿಹಾರ ಮಂತ್ರ:
ಯೋ ಸೌ ವಜ್ರಧರೋ ದೇವಃ ಆದಿತ್ಯಾನಂ ಪ್ರಭುರ್ಮತಃ |
ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
ಯೋ ಸೌ ಶೂಲಧಯೋ ದೇವಃ ಪಿನಾಕೀ ವೃಷವಾಹನಃ |
ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||
ಗ್ರಹಣ ದೋಷ ಪರಿಹಾರ ಕ್ರಮ:
ಶಿವನ ದೇವಾಲಯದ ದೀಪಕ್ಕೆ ಎಣ್ಣೆ ಒಪ್ಪಿಸುವುದು, ದೇಗುಲದಲ್ಲಿ ಕನಿಷ್ಠ 21 ಪ್ರದಕ್ಷಿಣೆ ಹಾಕುವುದು. ಗ್ರಹಣಕ್ಕೆ ಸಂಬಂಧಿಸಿದ ಧಾನ್ಯಗಳನ್ನು(ಗೋಧಿ ಹಾಗೂ ಹುರುಳಿ) ದಾನ ಮಾಡುವುದು.
ಗ್ರಹಣ ಎಫೆಕ್ಟ್ ಏನಾಗಬಹುದು?
1. ರಾಜ್ಯದಲ್ಲಿ ಅಕಾಲಿಕ ಮಳೆ, ಸೈಕ್ಲೋನ್ ಭೀತಿ, ಕೃಷಿಕ್ಷೇತ್ರಕ್ಕೆ ಹಾನಿ, ಕೆಂಪು ಧಾನ್ಯದಲ್ಲಿ ಹಾನಿ ಆಗುವ ಸಂಭವವಿದೆ.
2. ಅಲ್ಲದೆ ರಾಜ್ಯ ರಾಜಕೀಯದಲ್ಲಿ ಭಿನ್ನಮತ ಸ್ಫೋಟವಾಗುವ ಸಾಧ್ಯತೆ ಇದೆ. ಹಿರಿಯ ರಾಜಕಾರಣಿಗಳ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.
3. ದೇಶದ ವಿಚಾರದಲ್ಲಿ ಸೈನಿಕರಿಗೆ ತೊಂದರೆ, ನೆರೆಯ ರಾಷ್ಟ್ರದಿಂದ ಆಕಸ್ಮಿಕ ಯುದ್ಧಭೀತಿ ಆವರಿಸಲಿದೆ.
4. ದೇಶದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಸುನಾಮಿ, ಬೆಂಕಿ ಅನಾಹುತಗಳು ಸಂಭವಿಸುವ ಸಾಧ್ಯತೆಯಿದೆ.
5. ಧರ್ಮವನ್ನು ಅನುಸರಿಸುವ ಎಲ್ಲಾ ವ್ಯಕ್ತಿಗಳಿಗೂ ಅತೀ ವಿರೋಧ, ತೊಂದರೆಗಳು ಆಗಲಿದೆ.
6. ಗ್ರಹಣ ರಾಶಿಯಲ್ಲಿ ಬುಧ, ಗುರು, ಶನಿ, ಕೇತು ಇರುವುದರಿಂದ ಕಾಯಿಲೆಗಳು ಹೆಚ್ಚಾಗುತ್ತದೆ, ಮಾನಸಿಕ ನೆಮ್ಮದಿ ಕಡಿಮೆಯಾಗುತ್ತದೆ.