ನವದೆಹಲಿ: ಮುಂಬರುವ ಲೋಕಸಭೆ (Lok Sabha) ಚುನಾವಣೆಯೊಳಗೆ ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿಸುವ ಬಗ್ಗೆ ಹೈಕಮಾಂಡ್ ಗಮನ ಸೆಳೆಯುವ ಪ್ರಯತ್ನವನ್ನು ರಾಜ್ಯ ನಾಯಕರು ಮಾಡಿದ್ದಾರೆ.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಅವರನ್ನು ಭೇಟಿಯಾದ ಸಚಿವರಾದ ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ ಈ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಫೆ.1ಕ್ಕೆ ಕೇಂದ್ರ ಹಣಕಾಸು ಬಜೆಟ್ – ಅಂದೇ ಬಜೆಟ್ ಮಂಡನೆ ಯಾಕೆ?
ಸಂವಿಧಾನ ಜಾರಿಯಾಗಿ 75 ವರ್ಷ ಕಳೆದ ಹಿನ್ನೆಲೆ ಕರ್ನಾಟಕ ಸರ್ಕಾರದ ವತಿಯಿಂದ ಫೆಬ್ರವರಿ 24 ಮತ್ತು 25 ರಂದು ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಆಹ್ವಾನಿಸಲು ಸಚಿವರು ತೆರಳಿದ್ದರು.
ದೆಹಲಿಯಲ್ಲಿ ಖರ್ಗೆ ನಿವಾಸದಲ್ಲಿ ಭೇಟಿಯಾದ ನಾಯಕರು ಆಹ್ವಾನ ನೀಡಿದ ಬಳಿಕ ಲೋಕಸಭೆ ಚುನಾವಣೆ ಪೂರಕವಾಗಿ ವಿವಿಧ ಸಮುದಾಯಗಳಿಗೂ ಡಿಸಿಎಂ ಸ್ಥಾನಗಳನ್ನು ನೀಡಬೇಕು ಇದರಿಂದ ಪಕ್ಷಕ್ಕೆ ಹೆಚ್ಚು ಲಾಭವಾಗಲಿದೆ. ನಿಮ್ಮ ಗಮನಕ್ಕೆ ತಂದಿದ್ದೇವೆ. ಅಂತಿಮ ನಿರ್ಧಾರ ನಿಮ್ಮದು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಖರ್ಗೆ ಅವರು ಯಾವುದೇ ಪೂರಕ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವನಿಧಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ