ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರ ಹೋಗುವ ಗೇಟ್ ಬಳಿಯ ಮನಿ ಎಕ್ಸ್ಚೇಂಜ್ ಸೆಂಟರ್ ನಲ್ಲಿ ಬ್ಯಾನ್ ಆಗಿರುವ ನೋಟುಗಳನ್ನು ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ನಗರದ ಜಿಗಣಿಯ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯಕ್ಕೆ ಯೋಗ ತರಬೇತಿಗಾಗಿ ಪ್ರತಿ ತಿಂಗಳು ವಿವಿಧ ದೇಶಗಳಿಂದ ಪತ್ರಿ ತಿಂಗಳು 20ರಿಂದ 30 ಜನರು ಬರುತ್ತಾರೆ. ಇವರಲ್ಲಿ ಕೆಲವರಿಗೆ ಹಣ ವಿನಿಮಯ ಸಂದರ್ಭದಲ್ಲಿ ಬ್ಯಾನ್ ಆಗಿರುವ 500 ರೂ. ಮುಖ ಬೆಲೆಯ ಒಂದು ಅಥವಾ ಎರಡು ನೋಟುಗಳನ್ನು ಕೊಡುತ್ತಿದ್ದಾರೆ. ಈ ಕುರಿತು ಈಗಾಗಲೇ ಅನೇಕರು ಕುರಿತು ಪ್ರಧಾನಿ ಸಚಿವಾಲಯ, ವಿಮಾನಯಾನ ಸಚಿವಾಲಯ ಹಾಗೂ ಏರ್ಪೋರ್ಟ್ ಅಧಿಕಾರಿಗಳಿಗೂ ದೂರು ನೀಡಿದ್ದಾರೆ.
ಗ್ವಾಟಮಾಲಾ ದೇಶದ ಪ್ರಜೆ ರೋಮನ್ ಹಸಾರ್ಡ್ ಸಾರಾ ಮರ್ಸಿಡಿಸ್ ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯದಲ್ಲಿ ಪುಸ್ತಕ ಖರೀದಿಸಿ, ತಮ್ಮ ಬಳಿಯಿದ್ದ ಬ್ಯಾನ್ ಆಗಿರುವ 500 ರೂ. ಮುಖಬೆಲೆಯ ನೋಟು ನೀಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು, ಈ ನೋಟು ನಿಮ್ಮ ಬಳಿ ಹೇಗೆ ಬಂತು ಎಂದು ಸಾರಾ ಅವರನ್ನು ವಿಚಾರಿಸಿದ್ದಾರೆ. ಆಗ ಮರ್ಸಿಡಿಸ್ ಏರ್ಪೋರ್ಟ್ ಬಳಿಯ ಮನಿ ಎಕ್ಸ್ಚೇಂಜ್ ಸೆಂಟರ್ನಲ್ಲಿ ನೀಡಿರುವುದಾಗಿ ಹೇಳಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಇದೇ ರೀತಿ ಬ್ಯಾನ್ ಆಗಿರುವ ನೋಟುಗಳನ್ನು ವಿದೇಶಿಗರಿಗೆ ನೀಡಲಾಗುತ್ತಿದೆ. ದೇಶಕ್ಕೆ ಕೆಟ್ಟ ಹೆಸರು ತರುವ ಇದಾಗಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತ್ತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಸಹಾಯಕ ನಿರ್ದೇಶಕ ಮೋಹನ್ ಕಿಶೋರ್ ಒತ್ತಾಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv