ನವದೆಹಲಿ: ಮನೆ ಮುಂದೆ ವೃದ್ಧರೊಬ್ಬರು ಮೂತ್ರ ಮಾಡಿದ್ದಕ್ಕೆ ಮನೆಮಾಲೀಕ ಅವರಿಗೆ ಕಪಾಳಕ್ಕೆ ಹೊಡೆದಿದ್ದು, ವೃದ್ಧನ ಮಕ್ಕಳು ತಂದೆ ಮೇಲೆ ಹಲ್ಲೆ ಮಾಡಿದಕ್ಕೆ ರೊಚ್ಚಿಗೆದ್ದು ಮಾಲೀಕನನ್ನು ಕೊಲೆ ಮಾಡಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ.
ದಕ್ಷಿಣ ದೆಹಲಿಯ ಗೋವಿಂದ ಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಗೋವಿಂದ ಪುರಿ ನಿವಾಸಿ ಲಿಲು ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಈ ಪ್ರದೇಶದಲ್ಲಿ ವಿದ್ಯುತ್ ಕಟ್ ಮಾಡಲಾಗಿತ್ತು. ಹೀಗಾಗಿ ಲಿಲು ಹಾಗೂ ಪತ್ನಿ ಪಿಂಕಿ ತಮ್ಮ ಮನೆ ಮುಂದೆ ಮಾತನಾಡುತ್ತ ಕುಳಿತ್ತಿದ್ದರು. ಈ ವೇಳೆ ಪಕ್ಕದ ಬೀದಿಯಲ್ಲಿ ವಾಸಿಸುತ್ತಿದ್ದ ವೃದ್ಧರೊಬ್ಬರು ಲಿಲು ಮನೆ ಬಳಿ ಮೂತ್ರ ಮಾಡಿದ್ದಾರೆ. ಅದನ್ನು ನೋಡಿ ಲಿಲು ಕೋಪಗೊಂಡು ಅವರ ಕೆನ್ನೆಗೆ ಹೊಡೆದಿದ್ದಾನೆ. ಈ ವಿಷಯ ತಿಳಿದು ವೃದ್ಧನ ಇಬ್ಬರು ಮಕ್ಕಳು ತಂದೆ ಮೇಲೆ ಹಲ್ಲೆ ಮಾಡಿದ್ದಕ್ಕೆ ಸಿಟ್ಟಿನಿಂದ ಲಿಲು ಬಳಿ ಜಗಳ ಮಾಡಲು ಶುರುಮಾಡಿದರು.
ಹೀಗೇ ಮಾತಿನಲ್ಲಿ ಶುರುವಾದ ಜಗಳ ತಾರಕಕ್ಕೆ ಏರಿ ವೃದ್ಧನ ಇಬ್ಬರು ಮಕ್ಕಳು ರಸ್ತೆ ಬದಿಯಿದ್ದ ಸಿಮೆಂಟ್ ಇಟ್ಟಿಗೆಯಿಂದ ಲಿಲುಗೆ ಹೊಡೆದಿದ್ದಾರೆ. ಆತ ಎಚ್ಚರ ತಪ್ಪುವವರೆಗೂ ಕಲ್ಲಿನಿಂದ ಜಜ್ಜಿದ್ದಾರೆ. ಬಳಿಕ ಲಿಲುವನ್ನು ಆಸ್ಪತ್ರೆಗೆ ಸ್ಥಳೀಯರು ಕರೆದೊಯ್ದರು ಏನೂ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಆತ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಿದ ಬಳಿಕ ಲಿಲು ಹಲವು ಸರಗಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬ ವಿಷಯ ಹೊರಬಿದ್ದಿದೆ.
ಸದ್ಯ ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದ್ದು, ಇಬ್ಬರು ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.