ನವದೆಹಲಿ : ಪ್ರತಿಯೊಂದು ರಂಗದಲ್ಲಿ ಉನ್ನತ ಸ್ಥಾನಕ್ಕೇರಿದ ಮೇಲೆ ರಾಜಕೀಯದಲ್ಲೂ ಒಮ್ಮೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ಕೆಲವರು ಬಯಸುತ್ತಾರೆ. ಹಿಂದೆ ಕೆಲವು ನಟ ನಟಿಯರು, ಉದ್ಯಮಿಗಳು, ಕ್ರೀಡಾಪಟುಗಳು ಸೇರಿ ಇತರೆ ವಲಯದ ಪ್ರಮುಖರು ರಾಜಕೀಯಕ್ಕೆ ಸೇರಿ ಚುನಾಯಿತರಾಗಿದ್ದಾರೆ. ಅದೇ ಮಾದರಿಯಲ್ಲಿ ಈಗ ದೆಹಲಿ ಚುನಾವಣೆಯಲ್ಲಿ ಮೆಗಾ ಆಪರೇಷನ್ ಮಾಡಲು ವೈದ್ಯರು ಮುಂದಾಗಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದ್ದು, ಈ ಪಟ್ಟಿಯಲ್ಲಿ ವೈದ್ಯರ ಸಂಖ್ಯೆ ಹೆಚ್ಚಾಗಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಹಲವರು ಈ ಬಾರಿ ಚುನಾವಣೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಒಂದು ಹಂತದ ಮಾತುಕತೆ ನಡೆಸಿದ್ದಾರೆ.
2013 ರಲ್ಲಿ ಡಾ.ಹರ್ಷವರ್ಧನ್ ಕೃಷ್ಣನಗರದಿಂದ, ಲಕ್ಷ್ಮೀನಗರದಿಂದ ಡಾ.ಎ.ಕೆ.ವಾಲಿಯಾ, ಶಹದಾರಾದಿಂದ ಡಾ.ನರೇಂದ್ರನಾಥ್ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಮೂವರನ್ನು ಹೊರತಾಗಿ ಈ ಬಾರಿ ವೈದ್ಯ ಆಕಾಂಕ್ಷಿಗಳ ಪಟ್ಟಿ ಮತ್ತಷ್ಟು ಉದ್ದವಾಗಿದೆ.
ಈ ಬಾರಿ ಡಾ.ಎ.ಕೆ.ವಾಲಿಯಾ ಕೃಷ್ಣನಗರದಿಂದ ಟಿಕೆಟ್ ಬಯಸಿದ್ದು, ಡಾ.ನರೇಂದ್ರ ನಾಥ್ ಶಹದಾರ ಸ್ಪರ್ಧಿಸಲು ಇಚ್ಛಿಸಿದ್ದಾರೆ. ಡಾ.ವಿ.ಕೆ.ಮೊಂಗಾ ಮತ್ತು ಡಾ.ಅನಿಲ್ ಗೋಯಲ್ ಕೂಡಾ ಈ ಬಾರಿ ಟಿಕೆಟ್ ಬಯಸಿದ್ದಾರೆ. ಬಿಜೆಪಿ ಸೇರಿದ್ದ ಡಾ.ವಿ.ಕೆ.ಮೊಂಗಾ ಬಳಿಕ ಕಾಂಗ್ರೆಸ್ ಸೇರಿಕೊಂಡಿದ್ದರು. 2013 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೃಷ್ಣನಗರದಿಂದ ಡಾ.ಹರ್ಷ್ ವರ್ಧನ್ ಎದುರು ಸ್ಪರ್ಧಿಸಿ ಸೋಲನ್ನಪ್ಪಿದ್ದರು. ಈಗ ಪುನಃ ಬಿಜೆಪಿ ಸೇರಿರುವ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಇವರಲ್ಲದೇ ಹಿರಿಯ ಮೂತ್ರಶಾಸ್ತ್ರಜ್ಞ ಡಾ. ಅನಿಲ್ ಗೋಯಲ್ ಕೃಷ್ಣನಗರದಿಂದ ಬಿಜೆಪಿಯಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ದಂತ ತಜ್ಞ ಡಾ.ಕೆ.ಕೆ.ಚೌಧರಿ, ಮಹಿಳಾ ರೋಗಶಾಸ್ತ್ರಜ್ಞ ಡಾ. ವಂದನಾ ವಶಿಷ್ಠ ಹೂಡಾ ಸಿಟಿಯಿಂದ ಸ್ಪರ್ಧಿಸಲು ಕಸರತ್ತು ನಡೆಸಿದ್ದು, ಈ ಬಾರಿ ಒಟ್ಟು ಆರು ಮಂದಿ ವೈದ್ಯರು ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.