ನವದೆಹಲಿ: ಶುಕ್ರವಾರವಷ್ಟೇ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಜನಾಂಗಕ್ಕೆ ಮುಜುಗರವಾದರೂ ಪಕ್ಷಕ್ಕಾಗಿ ತ್ಯಾಗ ಮಾಡಲು ಸಿದ್ಧ ಎಂದಿದ್ದ ಆರೋಗ್ಯ ಸಚಿವ ಶ್ರೀರಾಮುಲು ಇಂದು ಡಿಸಿಎಂ ಸ್ಥಾನಕ್ಕೆ ಮತ್ತೆ ಲಾಬಿ ಆರಂಭಿಸಿದ್ದಾರೆ.
ಪಕ್ಷದ ವರಿಷ್ಠರ ಭೇಟಿಗೆ ದೆಹಲಿಗೆ ಆಗಮಿಸಿರುವ ಸಚಿವ ಶ್ರೀರಾಮುಲು, ಪ್ರಮುಖ ನಾಯಕರ ಭೇಟಿಗೆ ಪ್ರಯತ್ನ ಮಾಡುತ್ತಿದ್ದಾರೆ. ಶುಕ್ರವಾರದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಗೃಹ ಸಚಿವ ಅಮಿತ್ ಶಾ ಭೇಟಿಗೆ ಶ್ರೀರಾಮುಲು ಪ್ರಯತ್ನ ಮಾಡುತ್ತಿದ್ದಾರೆ. ಶುಕ್ರವಾರ ಅಮಿತ್ ಶಾ ರಾಜಸ್ಥಾನ ಪ್ರವಾಸದಲ್ಲಿದ್ದ ಕಾರಣ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಇಂದೂ ಭೇಟಿಗೆ ಅವಕಾಶ ಕೇಳಿದ್ದು, ಅಮಿತ್ ಶಾ ಭೇಟಿ ಮಾಡಬೇಕೆಂದು ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.
ರಾಜ್ಯದಲ್ಲಿ ಡಿಸಿಎಂ ಮಾಡುವಂತೆ ಸಮುದಾಯದಿಂದ ಒತ್ತಡ ಹೆಚ್ಚಾಗುತ್ತಿದೆ. ಚುನಾವಣೆಗೂ ಮುನ್ನ ಡಿಸಿಎಂ ಮಾಡುವ ಭರವಸೆ ನೀಡಿದ್ದೀರಿ. ಈ ಹಿನ್ನೆಲೆ ನಮ್ಮ ಸಮುದಾಯ ಸಂಪೂರ್ಣ ಬಿಜೆಪಿ ಬೆಂಬಲಿಸಿದ್ದು, ಈಗ ಮಾತುಕೊಟ್ಟಂತೆ ಡಿಸಿಎಂ ಸ್ಥಾನ ನೀಡಬೇಕೆಂದು ಶ್ರೀರಾಮುಲು ಒತ್ತಡ ಹಾಕಲಿದ್ದಾರೆ ಎನ್ನಲಾಗಿದೆ.
ಇದುವರೆಗೂ ಅಮಿತ್ ಶಾ ಭೇಟಿ ಮಾಡಲು ಶ್ರೀರಾಮುಲುಗೆ ಅವಕಾಶ ಸಿಕ್ಕಿಲ್ಲ. ಸಿಎಂ ಯಡಿಯೂರಪ್ಪಗೆ ಶೀಘ್ರ ಸಮಯ ನೀಡದ ಅಮಿತ್ ಶಾ ಈಗ ಸಚಿವ ಶ್ರೀರಾಮುಲುಗೆ ಸಮಯ ನೀಡಿ ಮನವಿ ಆಲಿಸುತ್ತಾರಾ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.