ಬೆಂಗಳೂರು: ಪದ್ಮನಾಭನಗರದ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಡಿಸಿಎಂ ಜಿ.ಪರಮೇಶ್ವರ್ ಭೇಟಿ ನೀಡಿ, ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಪ್ರಧಾನಿ ದೇವೇಗೌಡರಿಗೆ ಗಣೇಶ ಹಬ್ಬದ ಶುಭಾಶಯ ಕೋರಲು ಬಂದಿದ್ದೆ. ನೀವು ಅಂದುಕೊಂಡ ಹಾಗೇ ಯಾವುದೇ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ. ಇಂದು ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಇತರೆ ಯಾವುದೇ ಬೆಳವಣಿಗೆ ಆಗಿಲ್ಲ. ಬಿಬಿಎಂಪಿ ಹಾಗೂ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಸಹ ಮಾತನಾಡಿಲ್ಲ. ಅಲ್ಲದೇ ಅವರು ಒಂದು ಗಂಟೆಗಳ ಕಾಲ ತಮ್ಮ ರಾಜಕೀಯ ಅನುಭವವನ್ನು ನನ್ನೊಂದಿಗೆ ಹಂಚಿಕೊಂಡರು ಎಂದು ಹೇಳಿದರು.
ಈ ವೇಳೆ ಸುದ್ದಿಗಾರರು ಡಿಕೆ ಶಿವಕುಮಾರ್ರವರ ಹಸ್ತಕ್ಷೇಪದ ವಿಚಾರ ಪ್ರಸ್ತಾಪಿಸಿದಾಗ, ಬೆಳಗಾವಿಯಲ್ಲಿ ಪಕ್ಷದ ಕಚೇರಿ ಕಟ್ಟಲು ಡಿಕೆಶಿಯವರಿಗೆ ಜವಾಬ್ದಾರಿ ನೀಡಿದ್ದೆವು. ಹೀಗಾಗಿ ಅವರು ಅಲ್ಲಿಗೆ ಹೋಗಿ ಬಂದು ಮಾಡುತ್ತಿದ್ದರು. ಅಲ್ಲದೇ ಪಕ್ಷದ ಬೆಳವಣಿಗೆ ಹಾಗೂ ಇಲಾಖೆಯಲ್ಲಿನ ಕೆಲಸಗಳ ಕಡೆ ಗಮನಹರಿಸಿದ್ದರು ಅಷ್ಟೇ. ಬೆಳಗಾವಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಅಂತಹ ಸಮಸ್ಯೆ ಇದ್ದರೆ ನಾವೇ ಅದನ್ನು ಸರಿಪಡಿಸುತ್ತೇವೆ. ಇದೆಲ್ಲ ಪಕ್ಷದ ಆಂತರಿಕ ವಿಚಾರ. ಹೀಗಾಗಿ ಎಲ್ಲವನ್ನು ಪರಿಹಾರ ಮಾಡುತ್ತೇವೆ. ಒಂದು ವೇಳೆ ಸಮಸ್ಯೆಯಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲೇ ಸರಿಪಡಿಸುತ್ತೇವೆ. ಅಲ್ಲದೇ ಕೆಲವು ಶಾಸಕರ ಕ್ಷೇತ್ರಕ್ಕೆ ಅನುದಾನ ತಡ ಆಗಿರಬಹುದು. ಅದನ್ನು ಶೀಘ್ರವೇ ಸರಿಪಡಿಸುತ್ತೇವೆ ಎಂದು ತಿಳಿಸಿದರು.
ಈಗಾಗಲೇ ಸಚಿವ ರಮೇಶ್ ಜಾರಕಿಹೊಳಿಯವರನ್ನು ಕರೆದು ಮಾತನಾಡಿದ್ದೇನೆ. ಕ್ಷೇತ್ರದ ಕೆಲವು ಬೆಳವಣಿಗೆಗಳ ಬಗ್ಗೆ ಅವರು ಬೇಸರವಾಗಿದ್ದಾರೆ. ನೀವು ಅಂದುಕೊಂಡ ಹಾಗೆ ಯಾವುದೇ ಬೆಳವಣಿಗೆಗಳು ಇಲ್ಲ. ಯಾವೆಲ್ಲ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎಂದು ಸುದ್ದಿಯಾಗಿತ್ತು. ಅವರೆಲ್ಲರ ಬಳಿಯೂ ಮಾತನಾಡಿದ್ದೇನೆ. ಯಾರೂ ಸಹ ಪಕ್ಷ ಬಿಡವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಮೇಶ್ ಜಾರಕಿಹೊಳಿ ಆಪ್ತ ಶಾಸಕರ ಸಭೆಗಳಿಗೆ ಕಡಿವಾಣ ಹಾಕುತ್ತೇವೆ. ಇಂತಹ ಸಮಸ್ಯೆಗಳನ್ನು ಪಕ್ಷ ಬಹಳ ವರ್ಷಗಳಿಂದ ನೋಡಿಕೊಂಡು ಬಂದಿದೆ. ಜಾರಕಿಹೊಳಿ ಸಹೋದರರಿಗೆ ಅಸಮಾಧಾನ ಇದ್ದರೆ ನೇರವಾಗಿ ನಮ್ಮ ಮುಂದೆಯೇ ಹೇಳಿಕೊಳ್ಳಬಹುದಿತ್ತು. ಅಲ್ಲದೇ ನಾವು ಸರ್ಕಾರ ಅಸ್ಥಿರಗೊಳಿಸುವುದಿಲ್ಲವೆಂದು ನನ್ನ ಬಳಿ ಹೇಳಿದ್ದಾರೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ಹೊರಟರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv