ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ಪೌರಕಾರ್ಮಿಕ ಸುಬ್ರಮಣಿಯವರ ಮನೆಗೆ ಇಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ನಗರದ ದತ್ತಾತ್ರೇಯ ವಾರ್ಡ್ ನ ಮುನೇಶ್ವರ ಬ್ಲಾಕ್ ನಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ಪರಮೇಶ್ವರ್ ಮೃತ ಪೌರ ಕಾರ್ಮಿಕ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿ, ಪೌರಕಾರ್ಮಿಕ ಸುಬ್ರಮಣಿನ ಆತ್ಮಹತ್ಯೆ ವಿಷಾದದ ಸಂಗತಿ. ಬಿಬಿಎಂಪಿ ಯಲ್ಲಿ ಕೆಲಸ ಮಾಡುತ್ತಿದ್ದ ಸುಬ್ರಮಣಿ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡಿದ್ದೇವೆ. ಅವರು ಕಾಂಟ್ರಾಕ್ಟ್ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಕಾಂಟ್ರಾಕ್ಟ್ ಪದ್ಧತಿಯನ್ನು ಖಾಯಂ ಮಾಡುತ್ತೇವೆ. ಪೌರಕಾರ್ಮಿಕರಿಗೆ ನೇರವಾಗಿ ಸಂಬಳ ತಲುಪುವ ಕೆಲಸ ಆಗಬೇಕಿದೆ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.
ಕಾಂಟ್ರಾಕ್ಟರ್ ಗಳು ಆರು ತಿಂಗಳ ಸಂಬಳ ಬಾಕಿ ಉಳಿಸಿಕೊಂಡಿದ್ದಾರೆ. ವಾರದೊಳಗೆ ಎಲ್ಲರ ವೇತನ ಪೂರ್ಣಗೊಳಿಸಬೇಕು ಎಂದು ನಾನೀಗಾಗಲೇ ಆದೇಶ ಹೊರಡಿಸಿದ್ದು, ಯಾರೂ ಕೂಡ ಪಾಲಿಕೆ ಮುಂದೆ ವೇತನಕ್ಕಾಗಿ ಬರಬಾರದು ಎಂದರು.
ಸರ್ಕಾರದಲ್ಲಿ ಇಂತಿಷ್ಟೇ ಪೌರಕಾರ್ಮಿಕರ ನೇಮಕ ಮಾಡಿಕೊಳ್ಳಬೇಕೆಂಬ ನಿಯಮವಿದೆ. ಆದರೆ ಕಾಂಟ್ರಾಕ್ಟರ್ಗಳು ಹೆಚ್ಚು ಜನರ ನೇಮಕ ಮಾಡಿಕೊಂಡಿದ್ದು, ಸಮಸ್ಯೆಗಳಿಗೆ ಕಾರಣವಾಯ್ತು. ಹಾಗಾಗಿ ಎಲ್ಲ ಪೌರಕಾರ್ಮಿಕರ ಸಮಸ್ಯೆ ಶೀಘ್ರವೇ ಪರಿಹಾರವಾಗಲಿದೆ ಎಂದು ಪರಮೇಶ್ವರ್ ಭರವಸೆ ನೀಡಿದರು.