– ಸಮಯ ಪಾಲನೆ ಬಗ್ಗೆ ಅಧಿಕಾರಿಗಳಿಗೆ ಡಿಸಿ ಕ್ಲಾಸ್
ಬೆಂಗಳೂರು: ಬೆಳ್ಳಂಬೆಳಗ್ಗೆಯೇ ನೆಲಮಂಗಲದ ಬೇಗೂರು ಕೆರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರಿಗೌಡರವರು ಭೇಟಿ ನೀಡಿ ಪ್ರದಕ್ಷಿಣೆ ಹಾಕಿದ್ದಾರೆ.
ಜಿಲ್ಲೆಯ ಪ್ರತಿ ತಾಲೂಕಿನ ಪ್ರಮುಖ ಕೆರೆಗಳಿಗೆ ಭೇಟಿ ನೀಡಿ ಕೆರೆಗಳ ಪುನಶ್ಚೇತನಕ್ಕೆ ಜಿಲ್ಲಾಧಿಕಾರಿ ಕರೀಗೌಡ ಮುಂದಾಗಿದ್ದಾರೆ. ಅಂತೆಯೇ ಇಂದು ಬೆಳ್ಳಂಬೆಳಗ್ಗೆ 6 ಗಂಟೆ ಸುಮಾರಿಗೆ ನೆಲಮಂಗಲ ಪ್ರಮುಖ ಕೆರೆಯಾದ ಬೇಗೂರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಈ ವೇಳೆ ಸಾರ್ವಜನಿಕರು ಹಾಗೂ ಕೆಲ ಅಧಿಕಾರಿಗಳು ಬಾರದ ಕಾರಣ ಸಮಯ ಪಾಲನೆ ಬಗ್ಗೆ ಎಲ್ಲರಿಗೂ ಡಿಸಿ ಕ್ಲಾಸ್ ತೆಗೆದುಕೊಂಡಿದ್ದರು.
ಬಳಿಕ ಮಾಧ್ಯಮಗಳೊಂದಿಗೆ ಮಾತಾನಾಡಿದ ಜಿಲ್ಲಾಧಿಕಾರಿ, ಒಟ್ಟು 116 ಎಕರೆಯಷ್ಟು ವಿಶಾಲವಾಗಿರುವ ಕೆರೆಯನ್ನ ಅಭಿವೃದ್ಧಿ ಮಾಡುವ ನೆಪದಲ್ಲಿ ಆರ್ಟ್ ಆಫ್ ಲೀವಿಂಗ್ ಸಂಸ್ಥೆ ಸಿಎಸ್ಆರ್ (ಖಾಸಗಿ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿರ್ವಹಣೆ) ಅಡಿ ಎಚ್ಎಎಲ್ ನಿಂದ 16 ಕೋಟಿ ರೂಪಾಯಿ ಹಣ ಸಂಗ್ರಹ ಮಾಡಿ ವಂಚನೆ ಮಾಡಿದ್ದಾರೆಂದು ಡಿಸಿ ಕರಿಗೌಡ ಗಂಭೀರವಾದ ಆರೋಪ ಮಾಡಿದರು.
ಕೆರೆಯಲ್ಲಿ 2 ಗಿಡ 1 ಕೃಷಿ ಹೊಂಡದ ಮಾದರಿ ಗುಂಡಿಗಳನ್ನ ತೆಗೆದು 16 ಕೋಟಿಗಳಷ್ಟು ಲೆಕ್ಕ ತೋರಿಸಿದ್ದಾರೆ. ಇದರಲ್ಲಿ ಮೇಲ್ನೋಟಕ್ಕೆ ವಂಚನೆ ಎಸಗಿರುವುದು ಕಾಣುತ್ತದೆ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv