ದಾವಣಗೆರೆ: ಇಂದು ದೇಶದೆಲ್ಲಡೆ ಗಣೇಶ ಪ್ರತಿಷ್ಠಾಪನೆ ಮಾಡಿ ಅದ್ಧೂರಿಯಾಗಿ ಪೂಜೆ ಮಾಡುತ್ತಿದ್ದು, ಆದರಲ್ಲೂ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಹಿಂದೂ ಮುಸ್ಲಿಂ ಭಾಂದವರು ಕೂಡಿ ಭಾವೈಕ್ಯತೆಯಿಂದ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ.
ದಾವಣಗೆರೆಯ ವಿನೋಭಾನಗರದ 7ನೇ ಕ್ರಾಸ್ ನಲ್ಲಿ ಹ್ಯಾಪಿ ಫ್ರೆಂಡ್ಸ್ ಗ್ರೂಪ್ ವತಿಯಿಂದ ಸರ್ವಧರ್ಮ ಗಣೇಶ ಪ್ರತಿಷ್ಠಾಪನೆ ಮಾಡಲಾಯಿತು. ಕೇವಲ ಹಿಂದೂಗಳೇ ಆರಾಧಿಸುವ ಗಣೇಶೋತ್ಸವವನ್ನು ಹಿಂದೂ-ಮುಸ್ಲಿಂಮರು ಸೇರಿ ಅದ್ಧೂರಿಯಾಗಿ ಪ್ರತಿಷ್ಠಾಪನೆ ಮಾಡಿದರು.
ಪ್ರತಿ ವರ್ಷವೂ ಕೂಡ ಹಿಂದೂ ಮುಸ್ಲಿಂ ಬಾಂಧವರು ಸೇರಿ ಭಾವೈಕ್ಯತೆಯಿಂದ ಗಣೇಶ ಚತುರ್ಥಿಯನ್ನು ಆಚರಣೆ ಮಾಡುತ್ತಿದ್ದು, ಇದು ಇತರರಿಗೂ ಮಾರ್ಗದರ್ಶನವಾಗಲಿ ಎನ್ನುವುದು ನಮ್ಮ ಕಳಕಳಿಯಾಗಿದೆ ಎನ್ನುತ್ತಾರೆ ಹಿಂದೂ ಮುಸ್ಲಿಂ ಗೆಳಯರು. ಅಲ್ಲದೇ ಡೊಳ್ಳು ಬಾರಿಸುತ್ತ ಹಿಂದೂ ಮುಸ್ಲಿಂ ಬಾಂಧವರು ಸೇರಿ ಹೆಜ್ಜೆ ಹಾಕುತ್ತ ಗಣೇಶ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದರು.