– ಬಾಗಲಕೋಟೆಯಲ್ಲಿ ಸೇತುವೆ ಜಲಾವೃತ
ದಾವಣಗೆರೆ: ನಗರದಲ್ಲಿ ಕಳೆದ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಕೆಲ ಪ್ರದೇಶಗಳಲ್ಲಿ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ರಾತ್ರಿ 9 ಗಂಟೆಯಿಂದ ಸುರಿದ ಮಳೆಗೆ ಸಾವಿರಾರು ಮನೆಗಳಿಗೆ ನೀರು ನುಗ್ಗಿದ್ದು, ಹಲವು ಮನೆಗಳ ಗೋಡೆ ಕುಸಿದಿವೆ. ಅದಲ್ಲದೆ ಅಗ್ನಿಶಾಮಕ ದಳ ಕಚೇರಿಯ ಮುಂಭಾಗ ಮೊಣಕಾಲು ಉದ್ದ ನೀರು ನಿಂತಿದ್ದು, ಕಚೇರಿಯ ಒಳಗೂ ಮಳೆ ನೀರು ನುಗ್ಗಿದೆ. ಹೀಗಾಗಿ ಅಲ್ಲಿರುವ ಪ್ರಮುಖ ಕಡತಗಳು ನೀರುಪಾಲಾಗಿವೆ. ಸ್ಥಳಕ್ಕೆ ಬಂದ ತಹಶೀಲ್ದಾರ್ರನ್ನ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು, ನಮಗೆ ಪರಿಹಾರ ಬೇಡ ಮನೆ ಕಟ್ಟಿಸಿಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ವರ್ಷದಿಂದ ಇದೇ ಮೊದಲ ಬಾರಿಗೆ ದಾವಣಗೆರೆಯ ಸುತ್ತಮುತ್ತ ಉತ್ತಮ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಅಲ್ಲದೆ ಜಿಲ್ಲೆಯ ಮಾಯಕೊಂಡ ಹರಿಹರ ಸೇರಿದಂತೆ ಹಲವು ಕಡೆ ಉತ್ತಮ ಮಳೆಯಾಗಿದೆ. ನಗರದ ಶ್ರೀರಾಮ ಬಡಾವಣೆ, ಶಕ್ತಿನಗರ, ಎಸ್ಪಿಎಸ್ ನಗರ, ನೀಲಮ್ಮನ ತೋಟ ಸೇರಿದಂತೆ ವಿವಿಧ ಕಡೆ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿ ಇಡೀ ಜಾಗರಣೆ ಮಾಡುವಂತಾಯಿತು.
ಕೆಲವು ಕಡೆ ನೀರಿನಲ್ಲಿ ಬೈಕು ಕಾರುಗಳು ಮುಳುಗಡೆಯಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ಅಲ್ಲದೆ ಸಂಜೆಯಿಂದ ವಿದ್ಯುತ್ ಸಂಪರ್ಕವಿಲ್ಲದೆ ಜನರು ಪರದಾಡುವಂತಾಯಿತು. ಇನ್ನು ಎತ್ತಿನ ಸಂತೆ ಚಿಕ್ಕನಹಳ್ಳಿ ಸಂಪೂರ್ಣ ಮುಳುಗಡೆಯಾಗಿದೆ. ಮನೆಗೆ ನೀರು ನುಗ್ಗಿದ್ದರಿಂದ ಸ್ಥಳೀಯರು ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆಯುವಂತಾಯಿತು. ಭಾರೀ ಮಳೆಯಿಂದಾಗಿ ರಸ್ತೆ ಕಾಣದೆ ಟೆಂಪೋ ಲಾರಿಗಳು ಪಲ್ಟಿ ಹೊಡೆದಿದ್ದವು. ಪೊಲೀಸರು ಸದ್ಯ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
500 ಮನೆಗಳ ಕುಸಿತ: ಕಳೆದ ರಾತ್ರಿ ಬಿದ್ದಂತಹ ಮಳೆಗೆ ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಸುಮಾರು ಐನೂರು ಮನೆಗಳು ಕುಸಿದು ಬಿದ್ದಿವೆ. ಮಳೆ ನೀರು ಸರಾಗವಾಗಿ ಹೋದ್ರೆ ಮನೆಗಳಿಗೆ ನೀರು ನುಗ್ಗುವುದಿಲ್ಲ. ಜಿಲ್ಲೆಯಲ್ಲಿ ಅಪಾರ ಪ್ರಮಾಣದ ನಷ್ಟವಾಗಿದೆ. ಸಂತ್ರಸ್ತರಿಗೆ ಅವರಗೊಳ್ಳ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಕೆಲ ಕಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು. ಅದಷ್ಟು ಬೇಗ ಪರಿಹಾರ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿಎಸ್ ರಮೇಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಸೇತುವೆ ಜಲಾವೃತ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಬೆಳಗಿನ ಜಾವದಿಂದಲೇ ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಪರಿಣಾಮ ಸೇತುವೆಯೊಂದು ಮುಳುಗಿ ಸಂಚಾರ ಸ್ಥಗಿತಗೊಂಡಿದೆ. ಹುಬ್ಬಳ್ಳಿ ಸೋಲ್ಹಾಪುರ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಈ ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಬರುತ್ತಿದ್ದು, ಹಳೇ ಮಾಗ9ದ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಹೊಸ ಸೇತುವೆ ಮೂಲಕ ಸಂಚಾರ ಆರಂಭಗೊಂಡಿದೆ. ಬ್ರಿಟಿಷರ ಕಾಲದಲ್ಲಿ ನಿಮಾ9ಣವಾಗಿದ್ದ ಈ ಸೇತುವೆ ಈಗ ಜಲಾವೃತಗಿದೆ. ನದಿ ನೀರು ಅಕ್ಕಪಕ್ಕದ ಹೊಲ ಗದ್ದೆಗಳಿಗೂ ನುಗ್ಗಿದ್ದು ಬೆಳೆ ಹಾನಿ ಭೀತಿ ಎದುರಾಗಿದೆ. ಈ ಮಧ್ಯೆ ನದಿ ಪಾತ್ರದ ಜನರು ಪ್ರವಾಹ ಭೀತಿ ಎದುರಿಸುವಂತಾಗಿದೆ.