ಬೆಳಗಾವಿ: ಹುಕ್ಕೇರಿ ಹಿರೇಮಠದಿಂದ 9 ದಿನಗಳ ಕಾಲ ಹುಕ್ಕೇರಿ ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವಕ್ಕೆ ಪ್ರವಾಹ ಸಂತ್ರಸ್ತರಿಗೆ ಧನ ಸಹಾಯ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾಮಾಜಿಕ ಕಳಕಳಿಯಿಂದ ಉತ್ತರ ಕರ್ನಾಟಕದ ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡ 42 ಗ್ರಾಮಗಳ 120 ಕುಟುಂಬಗಳನ್ನು ಗುರುತಿಸಿ ಆರ್ಥಿಕ ಸಹಾಯದ ಜೊತೆ ಬಟ್ಟೆಗಳನ್ನು ನೀಡಿದ್ದಾರೆ.
ಹುಕ್ಕೇರಿ ಹಿರೇಮಠದಿಂದ ಸಹಾಯ ಮಾಡುವುದರ ಮೂಲಕ ಇತರೆ ಮಠಗಳಿಗೂ ದಸರಾ ಉತ್ಸವ ಮಾದರಿಯಾಯಿತು. ಪ್ರವಾಹದ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಉತ್ಸವಕ್ಕೆ ಶಾಸಕ ಉಮೇಶ ಕತ್ತಿ ಚಾಲನೆ ನೀಡಿದರು.
ದಸರಾ ಉತ್ಸವದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು, “ಪ್ರವಾಹದ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆ ಮಾಡಲಾಗುತ್ತಿದೆ. ಸಂತ್ರಸ್ತರಿಗೆ ಸಹಾಯ ಮಾಡುವುದರ ಹುಕ್ಕೇರಿ ಹಿರೇಮಠ ಧರ್ಮವನ್ನು ಆಚರಣೆ ಮಾಡುತ್ತಿದೆ” ಎಂದರು.
ದಸರಾ ಉತ್ಸವದಲ್ಲಿ ಶಾಸಕರಾದ ದುರ್ಯೋಧನ ಐಹೊಳೆ, ಆನಂದ ಮಾಮನಿ, ವಿಧಾನ ಪರಿಷತ ಸದಸ್ಯ ಎಂ.ಸಿ ವೇಣುಗೋಪಾಲ ಹಾಗೂ ಅಪಾರ ಪ್ರಮಾದಲಿ ಮಠದ ಭಕ್ತರು ಭಾಗಿಯಾಗಿದ್ದರು.