ಮೈಸೂರು: ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾವನ್ನೇ ಸರ್ಕಾರ ಮರೆತು ಬಿಟ್ಟಿದೆ. ಮುಂದಿನ ತಿಂಗಳು ಕೊನೆಯ ವಾರ ದಸರಾ ಆರಂಭವಾಗಲಿದೆ. ಆದರೆ ಇವರೆಗೂ ಮೈಸೂರು ದಸರಾ ಉನ್ನತ ಮಟ್ಟದ ಸಭೆ ನಡೆಸದೆ ನಿರ್ಲಕ್ಷ್ಯ ತೋರಲಾಗಿದೆ.
ಪ್ರತಿ ವರ್ಷ ಮೇ ಅಥವಾ ಜೂನ್ ತಿಂಗಳಲ್ಲಿ ದಸರಾ ಉನ್ನತ ಮಟ್ಟದ ಸಮಿತಿಯ ಸಭೆ ನಡೆಯುತ್ತದೆ. ಹೈಪವರ್ ಕಮಿಟಿ ಮೀಟಿಂಗ್ನಲ್ಲಿ ದಸರಾ ಅಂದಾಜು ವೆಚ್ಚ, ಅನುದಾನದ ಕುರಿತ ನಿರ್ಣಯ ಹಾಗೂ ದಸರಾ ಉದ್ಘಾಟಕರ ಹೆಸರನ್ನು ಈ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತದೆ. ಆದರೆ ಈ ವರ್ಷ ಜುಲೈ ಮುಗಿದು ಆಗಸ್ಟ್ ಬಂದರೂ ಹೈಪವರ್ ಕಮಿಟಿ ಮೀಟಿಂಗ್ ನಡೆದಿಲ್ಲ.
ಹೈಪವರ್ ಕಮಿಟಿಗೆ ರಾಜ್ಯದ ಮುಖ್ಯಮಂತ್ರಿಗಳೇ ಅಧ್ಯಕ್ಷರು. ಮೈಸೂರು ಉಸ್ತುವಾರಿ ಸಚಿವರು, ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ ಹಲವರು ಸದಸ್ಯರಿರುತ್ತಾರೆ. ಈ ಬಾರಿ ದಸರಾ ಅವಧಿಗಿಂತ ಮುಂಚೆಯೇ ಬಂದಿದೆ. ಸೆಪ್ಟೆಂಬರ್ 29ರಂದು ದಸರಾ ಉದ್ಘಾಟನೆಯಾಗಲಿದ್ದು, ಅಕ್ಟೋಬರ್ 8ಕ್ಕೆ ಜಂಬೂಸವಾರಿ ಮೆರವಣಿಗೆ ನಡೆಯಲಿದೆ.
ದಸರಾ ಆಚರಣೆಗೆ ಕೇವಲ 59ದಿನ ಬಾಕಿ ಇದೆ. ಆದರೆ ಮುಂಜಾಗ್ರತಾವಾಗಿ ಆಗಬೇಕಿದ್ದ ಯಾವ ಕೆಲಸವೂ ಆಗಿಲ್ಲ. ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಆದರೂ ಹೈಪವರ್ ಕಮಿಟಿ ಮೀಟಿಂಗ್ ಅನ್ನು ಬೇಗ ನಡೆಸುತ್ತಾರಾ ಕಾದು ನೋಡಬೇಕಿದೆ.