ಬೆಂಗಳೂರು: ನಾಡಹಬ್ಬ ದಸರಾ ಕಳೆದ 11 ದಿನಗಳಿಂದ ನಾಡಿನೆಲ್ಲೆಡೆ ಸಂತಸದ ವಾತಾವರಣ ಮೂಡಿಸಿದ್ದು, ಮನೆ ಮನೆಯಲ್ಲೂ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಆದರೆ ದಸರೆಯ ಎಫೆಕ್ಟ್ ಭಾನುವಾರ ಟ್ರಾಫಿಕ್ ಮೇಲೆ ಪರಿಣಾಮ ಬೀರಿದೆ.
ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಾಡ ಹಬ್ಬ ದಸರೆಯ ಸಾಲು ಸಾಲು ರಜೆಯ ಬಿಸಿ, ಟ್ರಾಫಿಕ್ ಜಾಮಿಗೆ ತಟ್ಟಿದೆ. ನೆಲಮಂಗಲ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 4 ಮತ್ತು 48 ರಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ. ಶಾಲಾ ಮಕ್ಕಳಿಗೆ ಹತ್ತು ದಿನಗಳ ದಸರಾ ರಜೆ, ಸರ್ಕಾರಿ ಹಾಗೂ ಖಾಸಗಿ ಕಾಲೆಜುಗಳು, ಸರ್ಕಾರಿ ನೌಕರರು ಸೇರಿದಂತೆ ಖಾಸಗಿ ಕಂಪನಿಗಳಿಗೆ 4 ದಿನಗಳ ರಜೆ ನೀಡಲಾಗಿತ್ತು. ಹೀಗಾಗಿ ಹಬ್ಬ ಆಚರಿಸಲು ಸ್ವಗ್ರಾಮಕ್ಕೆ ತೆರಳಿದ್ದವರು, ಈಗ ಮತ್ತೆ ಒಮ್ಮೆಲೆ ಬೆಂಗಳೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿಗಳು ಸಂಪೂರ್ಣ ಜಾಮ್ ಆಗಿತ್ತು.
ಇನ್ನೂ ಮೈಸೂರು ದಸರಾಗೆ ಹೋಗಿದ್ದವರು ಸಹ ಮೈಸೂರು ಬೆಂಗಳೂರು ರಸ್ತೆ ಜಾಂ ಇರುವುದು ಎಂದು ತಿಳಿದು ಮದ್ದೂರು ಕುಣಿಗಲ್ ಮಾರ್ಗವಾಗಿ ರಾಷ್ಟ್ರಿಯ ಹೆದ್ದಾರಿ 4 ತಲುಪುತ್ತಿರುವುದರಿಂದ ಹೆದ್ದಾರಿಯಲ್ಲಿ ಸಂಪೂರ್ಣ ಜಾಮ್ ಆಗಿದೆ. ಟ್ರಾಫಿಕ್ ನಲ್ಲಿ ಸಿಲುಕಿ ಒಂದೆಡೆ ಅಂಬುಲೆನ್ಸ್ ಗಳು ಪರದಾಡಿದರೆ, ಮತ್ತೊಂದೆಡೆ ಬಸ್ಗಳಲ್ಲಿ ಸೀಟ್ ಸಿಗದೆ ಪ್ರಯಾಣಿಕರು, ಖಾಸಗಿ ಬಸ್ಗಳ ಟಾಪ್ಏರಿ ಪ್ರಯಾಣಿಸುವ ಪರಿಸ್ಥಿತಿ ಉಂಟಾಗಿತ್ತು.
ಸಾಮಾನ್ಯವಾಗಿ ಒಂದು ದಿನಕ್ಕೆ 1 ಲಕ್ಷ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲಿದ್ದು, ಭಾನುವಾರ 10 ಲಕ್ಷಕ್ಕೂ ಅಧಿಕ ವಾಹನಗಳು ಇಲ್ಲಿ ಸಂಚರಿಸಿವೆ. ದಸರಾ ರಜೆಯ ಎಫೆಕ್ಟ್ ಟ್ರಾಫಿಕ್ ಮೇಲೆ ಬಿದ್ದಿದ್ದು, ಸಂಚಾರ ದಟ್ಟಣೆ ಬೆಳಗ್ಗೆ 9 ಗಂಟೆಯವರೆಗೂ ಮುಂದುವರಿಯುವ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv