ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಮತ್ತೊಮ್ಮೆ ‘ನೀನಾ..ನಾನಾ’ ವಾರ್ ಶುರುವಾಗಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ಕನ್ನಡ ಚಿತ್ರರಂಗದಲ್ಲಿ ಇಬ್ಬರ ಸ್ಟಾರ್ ನಟರ ಸಿನಿಮಾ ಬಿಡುಗಡೆಯಾಗಲಿದೆ.
ನಟ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾ ಮತ್ತು ನಟ ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾಗಳು ಆಗಸ್ಟ್ 9 ರಂದು ವರಮಹಾಲಕ್ಷ್ಮಿ ಹಬ್ಬಕ್ಕೆ ಥಿಯೇಟರ್ ಗೆ ಭರ್ಜರಿಯಾಗಿ ಎಂಟ್ರಿ ಕೊಡಲಿದೆ. 13 ವರ್ಷಗಳ ನಂತರ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖಾಮುಖಿಯಾಗಲಿದ್ದಾರೆ.
ಕಿಚ್ಚನ ‘ಮೈ ಆಟೋಗ್ರಾಫ್’ ಹಾಗೂ ದಚ್ಚುವಿನ ‘ಸುಂಟರಗಾಳಿ’ ಸಿನಿಮಾವೂ ಕೂಡ 2006ರ ಫೆಬ್ರವರಿ 17 ರಂದು ಒಂದೇ ದಿನ ತೆರೆಕಂಡು ಥಿಯೇಟರ್ ಅಖಾಡದಲ್ಲಿ ಧೂಳೆಬ್ಬಿಸಿದ್ದರು. ಇದೀಗ 13 ವರ್ಷಗಳ ನಂತರ ಮತ್ತೊಮ್ಮೆ ಗೆಳೆಯರ ನಡುವೆ ಬಾಕ್ಸ್ ಆಫೀಸ್ನಲ್ಲಿ ಯುದ್ಧ ಶುರುವಾಗುತ್ತಿದೆ. ಕುರುಕ್ಷೇತ್ರ ಸಿನಿಮಾದ ಮೂಲಕ ದರ್ಶನ್ ಅಖಾಡಕ್ಕೆ ಇಳಿದರೆ, ಇತ್ತ ಪೈಲ್ವಾನ್ ಚಿತ್ರದ ಮೂಲಕ ಸುದೀಪ್ ಪವರ್ ತೋರಿಸುವುದಕ್ಕೆ ಹೊರಟಿದ್ದಾರೆ. ಇಬ್ಬರು ಸೂಪರ್ ಸ್ಟಾರ್ಗಳ ಸಿನಿಮಾಗಳು ವರಮಹಾಲಕ್ಷ್ಮಿ ಹಬ್ಬದಂದು ಬೆಳ್ಳಿತೆರೆಯ ಮೇಲೆ ಆರ್ಭಟ ಶುರುಮಾಡಲಿದೆ.
ಇತ್ತೀಚೆಗಷ್ಟೆ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ‘ಕುರುಕ್ಷೇತ್ರ’ ಸಿನಿಮಾ ಟೀಸರ್ ರಿಲೀಸ್ ಮಾಡಲಾಗಿತ್ತು. ಈ ಸಿನಿಮಾ 3ಡಿಯಲ್ಲಿ ಸಿದ್ಧವಾಗುತ್ತಿದ್ದು, ಗ್ರಾಫಿಕ್ಸ್ ಕೆಲಸಗಳು ತಡವಾಗಿದ್ದರಿಂದ ಇದುವರೆಗೂ ರಿಲೀಸ್ ಆಗಿಲ್ಲ. ಕೊನೆಗೆ ನಿರ್ಮಾಪಕ ಮುನಿರತ್ನ ಅವರು ಪ್ರೆಸ್ಮೀಟ್ ಕರೆದು ಆಗಸ್ಟ್ 9 ರಂದು ಸಿನಿಮಾ ರಿಲೀಸ್ ಮಾಡುತ್ತೇವೆ ಎಂದು ದಿನಾಂಕವನ್ನು ಫಿಕ್ಸ್ ಮಾಡಿದ್ದರು.
ಮಂಗಳವಾರ ‘ಪೈಲ್ವಾನ್’ ಸಿನಿಮಾ ಹೊಸ ಪೋಸ್ಟರ್ ಐದು ಭಾಷೆಯಲ್ಲಿ ರಿಲೀಸ್ ಆಗಿದ್ದು, ಸುದೀಪ್ ಅವರ ಫಿಟ್ನೆಸ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗಾಗಲೇ ಪೈಲ್ವಾನ್ ಸಿನಿಮಾ ಶೂಟಿಂಗ್ ಮುಗಿಸಿ ಸೆನ್ಸಾರ್ ಹೋಗಲು ಸಿದ್ಧವಾಗಿದೆ. ಆದರೆ ನಿರ್ದೇಶಕ ಕೃಷ್ಣ ಅವರು ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಿಲ್ಲ. ಆದರೆ ವರಮಹಾಲಕ್ಷ್ಮಿ ಹಬ್ಬಕ್ಕೆ ನಾವು ಬರುತ್ತೇವೆ ಎಂದು ಹೇಳುತ್ತಿದ್ದಾರೆ.