ಹಾವೇರಿ: ಈ ರಸ್ತೆಗಳಲ್ಲಿ ಹಾದು ಹೋಗಿ ನೀವೇನಾದ್ರೂ ಸುರಕ್ಷಿತವಾಗಿ ಅಂದುಕೊಂಡ ಜಾಗ ಸೇರಿದ್ರೆ ನೀವು ಸಾವು ಗೆದ್ದು ಬಂದಂತೆಯೇ. ಯಾಕೆಂದರೆ ಭಾರೀ ಮಳೆಗೆ ರಸ್ತೆಗಳು ಕಿತ್ತು ಹೋಗಿ ಗುಂಡಿಗಳಾಗಿವೆ. ಕಿತ್ತು ಹೋದ ರಸ್ತೆಯಲ್ಲೇ ವಾಹನ ಸವಾರರು ಸಾಗುವ ದುಸ್ಥಿತಿ ನಿರ್ಮಾಣವಾಗಿದೆ.
ಹಾವೇರಿ ಜಿಲ್ಲೆಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಗುಂಡಿಮಯವಾಗಿವೆ. ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಕಿತ್ತುಹೋಗಿವೆ. ಅನೇಕ ಕಡೆಗಳಲ್ಲಿ ರಸ್ತೆಗಳ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಕೆಲವೆಡೆ ರಸ್ತೆಗಳು ಕೆಸರು ಗದ್ದೆಗಳಾಗಿವೆ. ಇಂಥಾ ರಸ್ತೆಗಳಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡ್ಕೊಂಡು ಓಡಾಡುತ್ತಿದ್ದಾರೆ.
ಮಳೆಗೆ ರಸ್ತೆ ಕಿತ್ತು ಹೋಗಿ ಮೂರು ತಿಂಗಳು ಕಳೆದರೂ ದುರಸ್ತಿ ಕಾರ್ಯ ನಡೆದಿಲ್ಲ. ಕಿತ್ತು ಹೋದ ರಸ್ತೆಗಳಲ್ಲಿ ಯಾವುದಾದರು ಒಂದು ವಾಹನ ಮುಂದೆ ಹೋಗೋದು ಸ್ವಲ್ಪ ತಡವಾದರೆ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಅಲ್ಲದೇ, ಈ ರಸ್ತೆಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅನಾಹುತಗಳು ನಡೆಯುತ್ತಿವೆ. ಅಲ್ಲದೆ ಜಿಲ್ಲೆಯಲ್ಲಿ ಹಾದು ಹೋಗಿರೋ ಪೂಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಸ್ಥಿತಿಯಂತೂ ಹೇಳತೀರದ್ದು. ರಸ್ತೆ ಅಗಲೀಕರಣ ಕಾಮಗಾರಿ ತೀರಾ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡಬೇಕಿದೆ.
ಇನ್ನಾದರೂ ಜಿಲ್ಲಾಡಳಿತ ಮತ್ತು ಸರ್ಕಾರ ಈ ಬಗ್ಗೆ ಗಮನಹರಿಸಿ ಕಿತ್ತು ಹೋಗಿರೋ ರಸ್ತೆ ಸರಿಪಡಿಸಬೇಕಿದೆ. ಆಗ ಮಾತ್ರ ವಾಹನ ಸವಾರರ ಎದುರಿಸುತ್ತಿರುವ ತೊಂದೆರೆ ನಿವಾರಣೆಯಾಗಲಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.